ಶುಕ್ರವಾರ, ಡಿಸೆಂಬರ್ 20, 2019

ಸಮುದ್ರಮಥನ

ಸಮುದ್ರಮಥನ

ಮರಣ ಬಾರದಂತೆ ಇರಲು
ಸುರರು ಅಸುರರಂದು ಬಯಸಿ
ಗುರುವಿನಲ್ಲಿ ಅವರ ಬಯಕೆಯನ್ನು ತಿಳಿಸಲು l
ಶರಧಿಯನ್ನು ಮಥಿಸಿ ನೀವು
ದೊರೆವುದಾಗ ನಿಮಗೆ ಸುಧೆಯು
ಇರದು ಮರಣ ಬಾಧೆ ಅದನು ಕುಡಿಯಲೆನ್ನಲುll

ಗಿರಿಯ ಶರಧಿ ನಡುವಲಿಟ್ಟು
ಉರಗವನ್ನು ಅದಕ್ಕೆ ಸುತ್ತಿ
ಭರದಿ ಕಡಲ ಕಡೆಯಲಿಕ್ಕೆ ಸಿದ್ಧವಾದರು l
ಬರದೆ ಇರಲು ಬೆಟ್ಟ ಮೇಲೆ
ಹರಿಯು ಮರುಕವನ್ನು ತಾಳಿ
ಹೊರಲು ಬಂದ ಗಿರಿಯ  ತಾನೆ ಕೂರ್ಮ ರೂಪದಿll

ನಾವು ಶಿರದ ಭಾಗವನ್ನು
ದೇವತೆಗಳು ಬಾಲವನ್ನು
ಯಾವ ಚರ್ಚೆಮಾಡದಂತೆ ಎಳೆವೆವೆನ್ನುತl
ಹಾವು ಹಿಡಿಯುತಸುರ ಸುರರು
ಧಾವತಿಯಲಿ ಮಥಿಸಲು ಸಂ
ಭಾವಿಸಿದವು ಹಲವು ದಿವ್ಯ ವಸ್ತುವಾಗಲೇll

ಇಂದು  ಬಂದ ಕಡಲಿನಿಂದ
ಚೆಂದದೈರವತವು ಬಂತು
ಬಂದನೊಬ್ಬ ದೇವ ವೈದ್ಯ ಹಿಡಿದು ಔಷಧl
ಮಂದಗಮನೆಯಾಗಿ ಬಂದ
ಇಂದಿರೆಯನು ಹರಿಯು ವರಿಸಿ
ಮುಂದೆ ದೊರೆತ ಕೌಸ್ತುಭವನು ಧರಿಸಿಕೊಂಡನುll


ಕಾಲಕೂಟ ವಿಷವು ಬರಲು
ಫಾಲನೇತ್ರ ಭರದಿ ಬಂದು
ಲೀಲೆಯಿಂದ ವಿಷವು ಕುಡಿದು ಭಯವ ಹರಿಸಿದl
ಮೇಳವಿಸುತ ಕಡೆಯುತಿರಲು
ಲೋಲಜಾಕ್ಷಿ ಮೋಹನಾಂಗಿ
ಪಾಲಗಡಲಿನಿಂದ ಸುಧೆಯ ಕಲಶ ತಂದಳುll

ಕೆಟ್ಟ ಗುಣದ ರಕ್ಕಸರಿಗೆ
ಕೊಟ್ಟುಬಿಡಲು ಸುಧೆಯ ನಾವು
ದುಷ್ಟತನದ ಜಗವಸುಡುವರೆಂದು ಚಿಂತಿಸಿl
 ಶಿಷ್ಟರಾದ ಸುರರಿಗಾಗ
 ತುಷ್ಟಳಾಗಿ ಸುಧೆಯ  ಕೊಡಲು
ಗುಟ್ಟಿನಲ್ಲಿ ರಾಹುವೆಂಬ ದೈತ್ಯ ಕುಡಿದನುll

ಭುವನವಂದ್ಯಳಾದ ದೇವಿ
ಅವನ ಮೋಸವನ್ನು ಅರಿತು
ತವಕದಿಂದ ಅವನ ರುಂಡವನ್ನು ತರಿದಳುl
ದವಡ ರಾಕ್ಷಸಾಧಮರಿಗೆ
ಅವಳು ಹರಿಯ ಮಾಯೆಯೆಂಬ
ಅವಗತಿಯನು ಕಳೆದುಕೊಂಡು ಮೂರ್ಖರಾದರುll

ಜಡತೆಯನ್ನು ತೊರೆದು ನಾವು
ಕಡೆಯುತಿರಲು ಮನದ ಶರಧಿ
ಪಡೆಯಬಹುದು ಜ್ಞಾನವೆಂಬ ದಿವ್ಯ ಸುಧೆಯನುl
ತೊಡೆದು ಕೆಟ್ಟ ಗುಣಗಳನ್ನು
ಹಿಡಿದು ಸತ್ಯ ಮಾರ್ಗವನ್ನು
ನಡೆಯುವವನು ಬಾಳಿನಲ್ಲಿ ಜಯವ ಪಡೆವನುll

ವಸುಮತಿ
೧೯-೧೨-೨೦೧೯

ಬುಧವಾರ, ನವೆಂಬರ್ 21, 2018

ಸತ್ಯ ಕಥಾ

ಸತ್ಯ ಕಥಾ
ಒಂದು ಸುಂದರ ಹಳ್ಳಿಯಲ್ಲಿ ಇಬ್ಬರು ಸಹೋದರಿಯರಿದ್ದರು. ಒಬ್ಬಳು ಸತ್ಯಾ ಇನ್ನೊಬ್ಬಳು ಕಥಾ. ಇಬ್ಬರೂ ಅತ್ಯಪೂರ್ವ
ಸುಂದರಿಯರು. ಸುಗುಣಶೀಲರು.
ಒಮ್ಮೆ ಅವರ ಊರಿಗೆ ಯಾತ್ರಿಕನೊಬ್ಬ ಬಂದ. ಅಲೆದಲೆದು ಆಯಾಸಗೊಂಡ ಆತನಿಗೆ ಆಶ್ರಯ, ಆಹಾರ ನೀಡಿ ಈ
ಸಹೋದರಿಯರು ಸತ್ಕರಿಸಿದರು. ಆತ ಬಲು ತುಷ್ಟನಾಗಿ ಹೊರಡುವ ಮೊದಲು ಅವರಿಗೊಂದು ಅತೀ ಸುಂದರವಾದ
ಕನ್ನಡಿಯನ್ನು ಉಡುಗೊರೆಯಾಗಿ ಕೊಟ್ಟು ಅದರಲ್ಲಿ ಯಾರು ನೋಡುತ್ತಾರೋ ಅವರ ಪ್ರತಿಬಿಂಬ ಕಾಣುವುದೆಂದು ತಿಳಿಸಿ
ಹೋದ.
ಆ ಮೊದಲು ಕನ್ನಡಿಯನ್ನೇ ನೋಡದ ಆ ಸೋದರಿಯರು ಕುತೂಹಲದಿಂದ ಅವರ ಮುಖಗಳನ್ನು ನೋಡಿಕೊಂಡರು.
‘ನಾನಿಷ್ಟು ಚೆಲುವೆಯೇ...’ ಎಂದು ಬೆರಗಾದರು.
ಸತ್ಯಾ “ ನೋಡು ಕಥಾ ನಾನೆಷ್ಟು ಸುಂದರಿ.. ನೀನು ಚೆನ್ನಾಗಿದ್ದೀ ಆದರೆ ನನ್ನ ಕಾಂತಿ ಜಾಸ್ತಿ..” ಎಂದಳು.
ಅದಕ್ಕೊಪ್ಪದ ಕಥಾ “ಇಲ್ಲ.. ನಾನೇ ಚೆಲುವೆ ...” ಎಂದಳು
ಹೀಗೇ ಅವರ ನಡುವೆ ವಾದ ಆರಂಭವಾಯ್ತು.. ಕೊನೆಗೆ ಅವರು ಊರ ನಡುವಿನ ಚೌಕದಲ್ಲಿ ಜನರನ್ನು ಕೇಳುವುದೆಂದು
ತೀರ್ಮಾನಿಸಿದರು.
ಮೊದಲು ಸತ್ಯಾ ಸರಳ ವೇಷ ಭೂಷಣ ಮತ್ತು ಅಗಾಧ ಆತ್ಮವಿಶ್ವಾಸದೊಂದಿಗೆ ಹಳ್ಳಿಯನ್ನು ಪ್ರವೇಶಿಸಿದಳು. ಎಲ್ಲಾ ಅವಳ
ಸೌಂದರ್ಯವನ್ನೇ ಮೆಚ್ಚುವರೆಂದು ಅವಳಿಗೆ ಖಚಿತವಾಗಿ ಗೊತ್ತಿತ್ತು.
ಆದರೆ ...
ಇದೇನಿದು!!! ಅವಳನ್ನು ಕಾಣುತ್ತಲೇ ಎಲ್ಲಾಆ ದೂರ ಹೋಗತೊಡಗಿದರು.. ಅವಳು “ಬನ್ನಿ...ಬನ್ನಿ...” ಎಂದು
ಕರೆಯತೊಡಗಿದಳು.. ಆದರೆ ಜನ ಇನ್ನೂ ವೇಗವಾಗಿ ದೂರ ಓಡಿದರು.. ಹೇಗಾದರೂ ಜನರನ್ನು ತನ್ನತ್ತ ಸೆಳೆಯಲೇ ಬೇಕೆಂದು
ಅವಳು ತನ್ನ ಬಟ್ಟೆಗಳನ್ನು ಕಳಚತೊಡಗಿದಳು.. ತಕ್ಷಣ ಎಲ್ಲಾ ಅವರವರ ಮನೆಯೊಳಗೆ ಸೇರಿಕೊಂಡು ಕಿಟಕಿ ಬಾಗಿಲುಗಳನ್ನೂ
ಮುಚ್ಚಿಕೊಂಡರು..
ಸತ್ಯಾ ತುಂಬಾ ನಿರಾಶಳಾದಳು.. ಸೋತ ಮುಖಹೊತ್ತು ಮನೆಗೆ ಹೋದಳು.
ಆಷ್ಟರಲ್ಲಿ ಕಥಾ ಸುಂದರ ಆಭೂಷಣಗಳನ್ನೂ , ಆಭರಣಗಳನ್ನು ತೊಂಟ್ಟು ಸಿದ್ಧವಾಗಿದ್ದಳು. ಅವಳು ಮುಗುಳು ನಗುತ್ತಾ
ಮೆಲ್ಲನೆ ಹಳ್ಳಿಯ ಚೌಕವನ್ನು ಸೇರುವುದೇ ತಡ ಎಲ್ಲಾ ಅವಳ ಸುತ್ತಾ ಸೇರ ತೊಡಗಿದರು..
“ ಓಹ್ ! ಎಂಥಾ ಚೆಲುವೆ!! ಅವಳ ದರ್ಶನದಿಂದ ಪಡೆದ ನಾವೇ ಅಷ್ಟವಂತರು ಬನ್ನಿ ನೀವೂ ನೋಡಿ.. ಬನ್ನಿ....” ಎಂದು ಜನ
ಗುಂಪು ಗುಂಪಾಗಿ ಅವಳನ್ನು ನೋಡಲು ಬಂದರು..
ಜಯಶೀಲಳಾದ ಮನೆಗೆ ಬಂದ ಕಥಾಳನ್ನು ದುಃಖಿತಳಾದ ಸತ್ಯಾ ಕೇಳಿದಳು.“ ಕಥಾ ನಾನು ನಿನ್ನಷ್ಟು ಚೆಲುವೆಯಲ್ಲ ಅನ್ನೋದೇ
ನಿಜವಿರಬಹುದು ಆದರೆ ಯಾಕೆ ನನ್ನನ್ನು ನೋಡಿದ ಕೂಡಲೇ ಜನ ದೂರವಾದರು ಎಂಬುದೇ ನನಗೆ ನೋವು ಕೊಡುತ್ತಿದೆ.
ಯಾಕೆ ಹೀಗಾಯಿತು...? ”

ಕಥಾ ನಗುತ್ತಾ ಹೇಳಿದಳು, “ ಇಲ್ಲ ಸತ್ಯಾ.. ನೀನೇ ನಿಜಕ್ಕೂ ಸುಂದರಿ.. ಆದರೆ ಜನ ಸತ್ಯವನ್ನು ತಾಳಿಕೊಳ್ಳಲಾರರು..
ಅದರಲ್ಲೂ ನಗ್ನ ಸತ್ಯ .. ಉಹೂ.. ಸಾಧ್ಯವೇ ಇಲ್ಲ.. ಅದಕ್ಕೇ ಅವರು ದೂರವಾದರು.. ಆದರೆ ನಾನು ಕಥಾ.. ನನ್ನ ಜೊತೆ
ಸತ್ಯದ ಜೊತೆ ಕಲ್ಪನೆಯ ಆಭರಣಗಳಿವೆ.. ಕುತೂಹಲದ ಆಭೂಷಣವಿದೆ.. ಅದರಿಂದ ಅವರೆಲ್ಲಾ ನನ್ನ ಕಡೆ ಆಕರ್ಷಿತರಾದರು..

ಸೋಮವಾರ, ಜುಲೈ 23, 2018

ಪತ್ರಕರ್ತರ ದಿವ್ಯ ಮೌನ



ಸುಸುಮಾರು ಎರಡು ವರ್ಷಗಳ ಹಿಂದೆ ಒಬ್ಬ ಹೆಸರಾಂತ ಪತ್ರಕರ್ತರು ಒಂದು ಮಕ್ಕಳ ನಾಟಕ ಸಂಕಲನಕ್ಕಾಗಿ ನಾಟಕಗಳನ್ನು ಆಹ್ವಾನಿಸಿದ್ದರು. ಅದರಂತೇ ನಾನು ನಾಟಕವೊಂದನ್ನು ಕಳಿಸಿದೆ. ನಂತರ ಅವರು ಅವರ ಟಿವಿ ಪ್ರೋಗ್ರಾಂ ಗಳ ನ್ನು ನೋಡುವಂತೆ ಮೆಸೇಜ್ ಮಾಡಿದ್ದರು. ಅವರ ಮಾತನ್ನು ಗೌರವಿಸಿ ಆ ಕಾರ್ಯಕ್ರಮವನ್ನು ನೋಡಿ ಅವರಿಗೆ ನನ್ನ ಅಭಿಪ್ರಾಯ ತಿಳಿಸಿದೆ. ಕೆಲದಿನಗಳ ನಂತರ ಇನ್ಯಾವುದೋ ಲಿಂಕ್ ಶೆರ್ ಮಾಡಲು ಹೇಳಿದರು. ಮಾಡೆ. ಆರೇಳು ತಿಂಗಳು ಅವರಾಗೇ ನಾನು ಕಳಿಸಿದ್ದ ನಾಟಕದ ಬಗ್ಗೆ ಹೇಳಬಹುದೆಂದು ಕಾದರೂ ಆ ಬಗ್ಗೆ ಚಕಾರವಿಲ್ಲ!! ನಂತರ ನಾನೇ ಕೇಳಿದೆ. ಅದಕ್ಕೆ ಉತ್ತರ ಇಲ್ಲ.. ಆದರೆ ಏನಾದರೂ ಶೇರ್ ಮಾಡಲು ಕೇಳುವುದು ನಡೆದಿತ್ತು.


ಅವರು ಒಂದು ಈ ಪತ್ರಿಕೆಯನ್ನೂ ನಡೆಸುವವರಾದ್ದರಿಂದ ನಾನು ಕಥೆಯನ್ನು ಕಳಿಸಲೇ ಎಂದು ಅವರ ಪರಿಚಯವಾದ ಆರಂಭದಲ್ಲೇ ಕೇಳಿದ್ದೆ. ತಕ್ಷಣ ವೇ ಕಳಿಸಿ ಎಂದಿದ್ದರು. ನಾನು ಯಾವ ಕಥೆಯನ್ನು ಕಳಿಸಬೇಕೆಂದಿದ್ದೆನೋ ಅದನ್ನು ಕಳಿಸದೇ ಇಲ್ಲಿ ಹಾಕಿ ತುಂಬ ಜನ ಮೆಚ್ಚಿದ್ದ ಒಂದು ಕಿರುಗಥೆಯನ್ನು ಕಳಿಸಿದೆ..


ಅದಕ್ಕೂ ಪ್ರತಿಕ್ರಿಯೆ ಇಲ್ಲ.. ಎರಡು ಮೂರು ತಿಂಗಳು ಬಿಟ್ಟು ನಾಟಕದ ಬಗ್ಗೆ ಕಥೆಯ ಬಗ್ಗೆ ವಿಚಾರಿಸಿದರೆ ದೊರೆತ ಉತ್ತರ ದಿವ್ಯ ಮೌನ..


ಕೆಲ ದಿನಗಳ ಹಿಂದೆ ಒಂದು ಅನಾಮಿಕ ನಂಬರಿಂದ ಸಂದೇಶಇದು ಎಲ್ಲರ ಮನೆಯಲ್ಲಿರಬೇಕಾದ ಪುಸ್ತಕ ಇಷ್ಟು ದುಡ್ಡು ಕಳಿಸಿ ಕೊಂಡುಕೊಳ್ಳಿ ..ಎಂದು.. ನಾಣು ಯಾರೋ ಎಂದು ಅಲಕ್ಷಿಸಿದೆ.. ಮತ್ತೆ ಕೆಲ ದಿನಗಳ ನಂತರ ಇನ್ನೊಂದು ಪುಸ್ತಕದ ಬಗ್ಗೆ ಅದೇ ಮಾದರಿಯ ಮೆಸೇಜ್.. ಆಗ ನಾನು,“ ಕ್ಷಮಿಸಿ ನಿಮ್ಮಪರಿಚಯವಾಗಲಿಲ್ಲ..ಎಂದು ಕೇಳಿದೆ.. ಆಗ ಅವರು ತಾವು ಇದೇ ಮಹನೀಯರ ಆಫೀಸಿನ ಅಡ್ಮಿನ್ ಎಂದು ತಿಳಿಸಿದರು.


ಅಲ್ಲ.. ನಿಮ್ಮ ಲೇಖನ /ಕಥೆ ಇಂಥ ಕಾರಣಕ್ಕೆ ಸ್ವೀಕೃತವಾಗಿಲ್ಲ ಎಂದು ಒಂದು ಮೆಸೇಜ್ ಮಾಡಿಸುವುದು ಆಫೀಸ್ , ಅಡ್ಮಿನ್ ಎಲ್ಲಾ ಇರುವವರಿಗೆ ಅಷ್ಟು ಕಷ್ಟವೇ. ಬರೆದು ಕಳಿಸಿದವರು ಉತ್ತರವನ್ನು ನಿರೀಕ್ಷಿಸುತ್ತಾರೆ ಎಂಬ ವಿಚಾರ ಅವರಿಗೆ ತಿಳಿಯದೇ? ನಮ್ಮ ಬರವಣಿಗೆಗೆ ಬೆಲೆಯೇ ಇಲ್ಲವೇ ? ಛೇ..


ಬೋಳುತಲೆ ಮತ್ತು ಡಾಕ್ಟರ್


ಬೋಳುತಲೆ ಮತ್ತು ಡಾಕ್ಟರ್
ಸುಮಾರು ಹತ್ತು ವರ್ಷಗಳ ಹಿಂದಿನ ಮಾತು. ಒಂದು ದಿನ ಶಾಲೆಯಲ್ಲಿರುವಾಗ  .   ಆಯಾಸ.. ಮೈಕೈ ನೋವು .. ಇವತ್ತು ಜ್ವರ ಬರುತ್ತೇನೋ ಅಂತ ಅನಿಸಿತು ಆದರೂ ಹೇಗೋ ಕೆಲಸ ಮುಗಿಸಿ ಮನೆಗೆ ಬಂದೆ.  ಸಾಯಂಕಾಲದ ಹೊತ್ತಿಗೆ  “ನೆನೆದವರ ಮನದಲ್ಲಿ ”ಅನ್ನುವ ಹಾಗೆ ಜ್ವರ ಬಂದೇಬಿಟ್ಟಿತು.  ಹೊರಗೆಲ್ಲೂ ತಿಂದಿರಲಿಲ್ಲ, ಮಳೆಯಲ್ಲಿ ನೆನೆದಿರಲಿಲ್ಲ.. ಆದರೂ ಯಾಕೆ ಜ್ವರ ಅಂತ ಆಶ್ಚರ್ಯವಾಯ್ತು.. ರಾತ್ರಿ ಒಂದು ಪ್ಯಾರಾಸಿಟಮಾಲ್ ನುಂಗಿ ಮಲಗಿದೆ.  ಮಧ್ಯರಾತ್ರಿಯ ವೇಳೆಗೆ ಜ್ವರ ಕಡಿಮೆಯಾದ್ದರಿಂದ  ನಾಳೆ ಸ್ಕೂಲಿಗೆ ಹೋಗಬಹುದು ಅನ್ನಿಸಿತು.. ಆದರೆ ಬೆಳಗ್ಗೆ ಮತ್ತೆ ಜ್ವರ. ಥರ್ಮಾಮೀಟರ್ ನೂರಾ ಮೂರು ಡಿಗ್ರೀ ತೋರಿಸುತ್ತಿತ್ತು..
ಇವರು ಇವತ್ತು ಸ್ಕೂಲಿಗೆ ರಜಾ ಮಾಡು ಡಾಕ್ಟರ್ ಹತ್ತಿರ ಹೋಗೋಣ ಎಂದರು.  ನನಗೂ ಅದೇ ಸರಿ ಅನಿಸಿತು.  ಇವರ ಆಫೀಸಿಗೆ ಸೇರಿದಂತೇ ಇರುವ  ಹೆಲ್ತ್ ಸೆಂಟರ್ಗೆ ಯಾವಾಗಲೂ ನಾವು ಹೋಗುವುದು.  ಅಲ್ಲಿನ ಡಾಕ್ಟರ್ರುಗಳೆಲ್ಲ ನನಗೆ ಚೆನ್ನಾಗೆ ಪರಿಚಯ. 
 ನಾವು ಡಿಸ್ಪೆನ್ಸರಿ ತಲುಪಿದಾಗ ಬೆಳಗ್ಗೆ ಎಂಟು ಗಂಟೆ. ಇವರು “ನೀನು ಇಲ್ಲೇ ಕೂತಿರು ನಾನು ಸೈನ್ ಮಾಡಿ  ಬರ್ತೀನಿ ...” ಅಂತ ಹೋದರು.  ಇಡೀ ಕಟ್ಟಡದಲ್ಲಿ  ಪೇಷಂಟ್ ಅಂತ ನಾನೊಬ್ಬಳೇ.. ಉಳಿದ ಸಿಬ್ಬಂದಿಗಳು ಒಬ್ಬೊಬ್ಬರಾಗಿ ಬರ್ತಿದ್ದರು.. ಕೆಲವರು  ರೂಮುಗಳ ಬಾಗಿಲುಗಳನ್ನು ತೆರೆದು ಅಂದಿನ  ಕೆಲಸಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.. ಡಾಕ್ಟರ್ ಗಳು ಬರುವುದು ಎಂಟೂ ಮುಕ್ಕಾಲರಿಂದ ಒಂಬತ್ತು ಗಂಟೆಗೆ ಅಂತ ಗೊತ್ತಿತ್ತು.
 ಅಲ್ಲಿರುವ ನಾಲ್ಕು ಜನ ಡಾಕ್ಟರ್ ಗಳಲ್ಲಿ ಒಬ್ಬರು ಲೇಡಿ ಡಾಕ್ಟರ್. ನಾನು  ಯಾವಾಗಲೂ ಅವರ ಬಳಿಯೇ ಹೋಗೋದು. ಯಾಕೋ ಪುರುಷ ಡಾಕ್ಟರ್ ಗಳ ಬಳಿ ಹೋಗಲು ನನಗೆ ಅಷ್ಟು ಕಂಫರ್ಟ್ ಅನಿಸೋಲ್ಲ..  ಹಾಗಾಗಿ ಲೇಡೀ ಡಾಕ್ಟರ್  ಕೊಠಡಿಯ ಬಳಿ ಕುಳಿತೆ. ನಿಧಾನವಾಗಿ  ಪೇಶಂಟುಗಳು ಬರಲಾರಂಭಿಸಿದ್ದರು. ಇದ್ದಕ್ಕಿಂದ್ದಂತೇ ನನ್ನ ನೋಟ   ಆ ಲೇಡಿ ಡಾಕ್ಟರರ  ರೂಮಿನ ಮುಚ್ಚಿದ್ದ ಬಾಗಿಲ ಮೇಲೆ ಹರಿಯಿತು.. ಅಯ್ಯೋ ಹರಿಯೇ!     “ ಡಾಕ್ಟರ್ ರಜೆಯಲ್ಲಿದ್ದಾರೆ ”.ಎಂಬ ಬೋರ್ಡು ಅಲ್ಲಿ  ಆರಾಮವಾಗಿ ತೂಗಾಡುತ್ತಿತ್ತು.. ಇನ್ನೇನು ಮಾಡುವುದು. ಬೇರೆ ಡಾಕ್ಟರರ ಬಳಿ ಹೋಗದೇ ವಿಧಿಯಿರಲಿಲ್ಲ.. ಜ್ವರ ಸುಡುತ್ತಿತ್ತು.
 ಅವತ್ತು ಸೋಮವಾರವಾದ್ದರಿಂದ ಜಾಸ್ತಿ ಜನ  ಪೇಶಂಟುಗಳಿದ್ದರು.  ನಾನು ಎಲ್ಲಗಿಗಿಂತಾ ಮೊದಲೇ ಬಂದದ್ದರಿಂದ ನಾನು ಮೊದಲು ಡಾಕ್ಟರನ್ನು ನೋಡುವುದು.. ಅಲ್ಲಲ್ಲ.. ನನ್ನನ್ನೇ ಮೊದಲು ಡಾಕ್ಟರ್ ಪರೀಕ್ಷಿಸುವುದು ನ್ಯಾಯಸಮ್ಮತವೆಂದು. ನನಗೆ ತುಂಬಾ ಜ್ವರ ಇದ್ದುದರಿಂದ ನನಗೆ ನಾನೇ ಆದ್ಯತೆ ನೀಡಿಕೊಳ್ಳುವುದು ಧರ್ಮ ಸಮ್ಮತವೆಂದು ಮನಸ್ಸು ಹೇಳಿದರಿಂದ ನಾನು  ಡಾಕ್ಟರ್  ಕೊಠಡಿಯ ಬಾಗಿಲ ಬಳಿ ನಿಂತೆ   ಅವರು ಬಂದ ತಕ್ಷಣವೇ   ನಾನು ಹೋಗಬಹುದು.  ಬೇಗ ಔಷಧಿ ತಗೊಂಡು ಮನೆಗೆ ಹೋಗಬಹುದು ಅಂತ ಸುಸ್ತಾಗ್ತಿದ್ದರೂ ಅಲ್ಲೇ ನಿಂತೆ. ಯಾಕೆಂದರೆ ನಾನೇನಾದರೂ ಎಲ್ಲಾ ಪೇಷಂಟ್ ಗಳ. ಜೊತೆ ಕುಳಿತರೆ  ನನ್ನ  ಆಲೋಚನೆಗಳಲ್ಲೇ ಮುಳುಗಿ ಹೋಗ್ತೀನಿ..  ಕಡೆಗೆ ತುಂಬಾ ತಡವಾಗುತ್ತದೆ ಅಂತ ಗೊತ್ತಿತ್ತು..
 ಅದಾಗಿ ಸ್ವಲ್ಪ ಸಮಯದಲ್ಲೇ ಒಬ್ಬರು  ಆ ರೂಮಿನ ಒಳಗೆ ಹೋಗಲು ಯತ್ನಿಸಿದರು. ಅರೇ ನಾನು  ಮೊದಲು ಹೋಗಬೇಕೆಂದು ಬಾಗಿಲಲ್ಲೇ ಪೆಡಂಭೂತದ ಥರ ನಿಂತಿರುವಾಗ, ಇಷ್ಟೊಂದು ಜನ ಕಾಯುತ್ತಿರುವಾಗ ಹೀಗೆ ನುಗ್ತಿದಾರಲ್ಲ ಅಂತ ಅಚ್ಚರಿಯಾದರೂ  ಅವರು ಹೊಸಬರಿರಬೇಕು ಅಂತ “ ಸರ್, ಇನ್ನೂ ಡಾಕ್ಟರ್ ಬಂದಿಲ್ಲ.. ಅಲ್ಲಿ ಕುಳಿತು ಕಾಯಿರಿ.. ನಿಮ್ಮ ಸರದಿ ಬಂದಾಗ  ಬರಬಹುದು..” ಎಂದು ವಿನಯವಾಗೇ ಹೇಳಿದೆ..
 ಆದರೆ ಅವರು “ ನಾನೆ ಡಾಕ್ಟರ್.. ” ಅಂತ ನಗುತ್ತಾ ಹೇಳಿದರು..  ಅವರ ಮುಖ ಮತ್ತೆ ಗಮನಿಸಿದೆ.. ‘ ಛೇ ಇವರು ಹೇಗೆ ಡಾಕ್ಟರ್ ಆಗಲಿಕ್ಕೆ ಸಾಧ್ಯ? ನಾನು ಡಾಕ್ಟರ್ ಇಲ್ಲ ಅಂತ ಹೇಳಿದ್ದನ್ನು ನಂಬದೇ ಹೀಗೆ ಹೇಳ್ತಿರಬಹುದು..” ಅಂತ ಮನಸ್ಸಿನಲ್ಲೇ ಯೋಚಿಸಿ.. “ ಇಲ್ಲ ಸರ್.. ನಿಜವಾಗಿಯೂ ಒಳಗೆ ಡಾಕ್ಟರ್ ಇಲ್ಲ.. ಅವರು ಬಂದಮೇಲೆ ನಾನು ಮೊದಲು ಹೋಗ್ತೀನಿ..  ಬೆಳಗ್ಗೆ ಎಂಟು ಗಂಟೆಗೇ ಬಂದು ಕಾಯ್ತಿದೀನಿ.. ಪ್ಲೀಸ್ ಅಲ್ಲಿ ಕೂತ್ಕೊಳ್ಳಿ...”   ಎಷ್ಟೇ ನಯವಾಗಿ ಹೇಳಿದರೂ ನನ್ನ ಕೊನೆಯ ಮಾತಿನಲ್ಲಿ ಅಸಮಾಧಾನ . ಧ್ವನಿತವಾಗೋದನ್ನು ತಡೆಯಲಾಗಲಿಲ್ಲ .  ಅವರು ಮತ್ತೆ “ ನಾನೆ ಡಾಕ್ಟರ್..ಮೇಡಂ ” ಅಂದರು.
 ಅಷ್ಟು ಹೊತ್ತಿಗೆ ಇವರು ಬಂದರು.. ನಾನು ಬಾಗಿಲಲ್ಲಿ ನಿಂತಿದ್ದನ್ನು ನೋಡಿ “ ಏನಾಯ್ತು” ಅಂತ ಕೇಳಿದ್ರು..  ನಾನು ,“ಏನಿಲ್ಲ.. ಇನ್ನೂ ಡಾಕ್ಟರ್ ಬಂದಿಲ್ಲ.. ”ಅಂದೆ..ಆಗ   ಇವರು,“ ಇವರೇ ಡಾಕ್ಟರ್...”  ಅಂತ   ಹೇಳಿದರು.. ನನಗೆ ನಂಬಲಾಗಲಿಲ್ಲ..   ಆ ಆಸ್ಪತ್ರೆಯಲ್ಲಿ ಎಲ್ಲಾ ಪುರುಷ ಡಾಕ್ಟರುಗಳೂ ಬಾಲ್ಡಿಗಳು.. ಇವರಿಗೆ ನೋಡಿದರೆ ತಲೆ ತುಂಬಾ ಕೂದಲಿದೆ.. ಇವರು ಡಾಕ್ಟರ್ ಆಗಲಿಕ್ಕೆ ಹೇಗೆ ಸಾಧ್ಯ? “ ಎಂಬ ಅಚ್ಚರಿಯ ಜೊತೆ ಡಾಕ್ಟರನ್ನೇ ನೀವು ಡಾಕ್ಟರ್ ಅಲ್ಲ ಅಂತ ವಾದಿಸಿ ಹೊರಗೇ ನಿಲ್ಲಿಸಿದ್ದಕ್ಕೆ ತುಂಬಾ ಲಜ್ಜೆಯಾಯ್ತು..
ಅಲ್ಲಿದ್ದ ಹಳೆಯ ಡಾಕ್ಟರ್ ಗೆ ವರ್ಗವಾಗಿ ಆ ಜಾಗಕ್ಕೆ ಈ ಹೊಸ ಡಾಕ್ಟರ್ ಬಂದದ್ದದ್ದು ನನಗೆ ಗೊತ್ತಿರಲಿಲ್ಲ
 ಅವರು ನನ್ನ ಟೆಸ್ಟ್ ಮಾಡಿ ಔಷಧಿ ಕೊಟ್ಟ ಮೇಲೆ ಕೇಳಿದ್ರು ಯಾಕೆ ನಿಮಗೆ ನಾನು ಡಾಕ್ಟರ್ ಅಂತ ನಂಬಿಕೆ ಬರಲಿಲ್ಲ? ಅಂತ ಅದಕ್ಕೆ ನಾನು ನೆಮ್ಮ ತಲೆಯಲ್ಲಿ ಕೂದಲಿದೆಯಲ್ಲಾ.. ಆ ಆಸ್ಪತ್ರೆಯಲ್ಲಿ ಎಲ್ಲಾ ಪುರುಷ ಡಾಕ್ಟರುಗಳೂ ಬಾಲ್ಡಿಗಳು.  ಅದಕ್ಕೆ” ಎಂದು ಮುಗ್ಧವಾಗಿ  ಹೇಳಿದಾಗ ಇಬ್ಬರೂ ಜೋರಾಗಿ ನಕ್ಕಿದ್ದರು..
ಇತ್ತೀಚೆಗೆ ಅದೇ ಡಾಕ್ಟರ್ ಯಾವುದೋ ಸಮಾರಂಭದಲ್ಲಿ ಸಿಕ್ಕಾಗ ಅವರೂ  ಸ್ವಲ್ಪ ಬಾಲ್ಡಿಯಾಗಿದ್ದನ್ನು ಗಮನಿಸಿದೆ.. ಅವರು ಅದು ಹೇಗೆ ಆ ಪ್ರಸಂಗವನ್ನು ನೆನಪಿಟ್ಟಿದರೋ ಕಾಣೆ. ನನ್ನ ಹತ್ತಿರ ಬಂದು “ಮೇಡಮ್ ನಾನು ಈಗೀಗ ಡಾಕ್ಟರ್ ಆಗ್ತಿದೀನಿ  .. ಅಂದರ ನೋಡಿ ..”ಅಂತ ತಮ್ಮ ತಲೆಯ ಮೇಲೆ ಕೈಯ್ಯಾಡಿಸುತ್ತಾ ಹೇಳಿದಾಗ ನನಗೆ  ಲಜ್ಜೆಯೂ ಆಯ್ತು ನಗುವೂ ಬಂತು..

ವಸುಮತಿ
೨೩-೭-೧೮
 ಆಶಾಢ ಏಕಾದಶಿ
ಸೋಮವಾರ


  



ಬುಧವಾರ, ನವೆಂಬರ್ 16, 2016

ಅಸಹಾಯಕತೆ


ಅಸಹಾಯಕತೆ ಎಂಬುದು ಎಷ್ಟೊಂದು ನೋವು ಕೊಡುತ್ತದೆ ಅನ್ನೋದು ನನಗೆ ಕೆಲಸಮಯದ ಹಿಂದೆ ಆದ ಅನುಭವದಿಂದ ಗೊತ್ತಾಯ್ತು. ಎರಡನೇ ಬಾರಿ ಹಾಕ್ತಿದೀನಿ

ನಾನು ಶಾಲೆ ಮುಗಿಸಿಕೊಂಡು ಬರುವಾಗ ಸ್ವಲ್ಪ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕಾದ್ದರಿಂದ ಅರ್ಧ ದಾರಿಲಿ ಆಟೋದಿಂದ ಇಳಿದು ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೊರಟೆ. ಮುಖ್ಯ ರಸ್ತೆಯ ವಾಹನ ದಟ್ಟಣೆ ಮತ್ತು ಪಲ್ಯೂಶನ್ ಗಳಿಂದ ಬಚಾವಾಗಲು ಒಳ ಹಾದಿಯಲ್ಲಿ ಹೋಗುವುದೆಂದು ತೀರ್ಮಾನಿಸಿ ಹೊರಟೆ. 

ಒಂದು ಸ್ವಲ್ಪದೂರ ಸಾಗುವಷ್ಟರಲ್ಲಿ ಮಗುವೊಂದರ ಆಕ್ರಂದ, ಹಿರಿಯರೊಬ್ಬರ ಕಿರುಚಾಟ ಕೇಳಿತು. ಮುಂದೆ ಹೋಗಿ ನೋಡಿದಾಗ ತಂದೆಯೊಬ್ಬರು ಮಗುವನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ಮಗು `` ಸ್ಕೂಲ್.... ಸ್ಕೂಲ್ ....''ಅಂತ ಆಳುತ್ತಾ ದೈನ್ಯವಾಗಿ ನನ್ನನ್ನು ನೋಡಿತು.

ಅದೇ ಮಗುವನ್ನು ಈಗ್ಗೆ ಎಂಟು -ಹತ್ತು ದಿನಗಳ ಹಿಂದೆ ಇದೇ ದಾರಿಯಲ್ಲಿ ಬಂದಾಗ ನಾನು ನೋಡಿದ್ದೆ. ಹರುಕು, ಹಳೆ ಬಟ್ಟೆ ತೊಟ್ಟಿದ್ದರೂ ಅದರ ಕಣ್ಣುಗಳಲ್ಲಿದ್ದ ಮಿಂಚು ನನ್ನನ್ನು ಸೆಳೆದಿತ್ತು. ಅವಳನ್ನು ಹತ್ತಿರ ಕರೆದು, ನನ್ನ ಬ್ಯಾಗಿನಲ್ಲಿದ್ದ ಚಾಕ್ಲೇಟನ್ನು ಅವಳ ಕೈಗಿತ್ತು `` ಯಾವ ಸ್ಕೂಲಿಗೆ ಹೋಗ್ತೀಯಾ ಪುಟ್ಟಿ? ನಿನ್ನ ಹೆಸರೇನು.....? ಅಂತ ಕೇಳಿದ್ದೆ..................

ಮಗು `` ಸ್ಕೂಲಿಗೆ ಹೋಗಲ್ಲಾ ಆಂಟಿ. ಮನೆ ಕೆಲ್ಸ ಮಾಡ್ತೀನಿ....'' ಅಂದಾಗ ನಾನು `` ನೀನು ಸ್ಕೂಲಿಗೆ ಹೋಗ್ಬೇಕಮ್ಮಾ.ನಿಮ್ಮ ಅಪ್ಪ ಅಮ್ಮಂಗೆ ಕೇಳು ಸ್ಕೂಲಿಗೆ ಸೇರ್ಸಿ ಅಂತ. ಹಟ ಮಾಡಿ ಆದ್ರೂ ಸ್ಕೂಲಿಗೆ ಸೇರ್ಬೇಕು. ಆಯ್ತಾ.....ನಿಂಗೆ ಪುಸ್ತಕ ಪೆನ್ಸಿಲ್ಲು ಎಲ್ಲಾ ನಾನು ಕೊಡಿಸ್ತೀನಿ.....?ಅಂತ ಅವಳ ತಲೆ ಸವರಿ ಏನೋ ದೊಡ್ದ ಕೆಲಸ ಮಾಡಿದ ತೃಪ್ತಿಯಿಂದ ಮನೆ ಸೇರಿದ್ದೆ.

ನನ್ನನ್ನು ನೋಡಿ ಮಗುವಿನ ಅಳು ಇನ್ನೂ ಹೆಚ್ಚಾಯ್ತು. ಅವಳನ್ನು ಬಡಿಯುತ್ತಿದ್ದ ಅವಳ ತಂದೆ ನನ್ನನ್ನು ನೋಡಿದರು. ಅಬ್ಬಾ! ಕೆಂಪು ಕಣ್ಣುಗಳ ಕ್ರೂರ ನೋಟಕ್ಕೆ ನಾನು ನಡುಗಿ ಹೋದೆ! ಆತ ಬಹುಶ: ಕುಡಿದಿದ್ದಿರಬಹುದು. ಅವರಿಗೆ ``ಮಗು ಸ್ಕೂಲ್ಗೆ ಸೇರಿಸಿ ಅಂತ ಹಟ ಮಾಡುವಂತೆ ಕುಮ್ಮಕ್ಕು ಕೊಟ್ಟಿದ್ದು ಇವಳೇ.....'' ಅಂತ ಗೊತ್ತಾಯಿತೇನೋ. ನನ್ನನ್ನು ದುರುಗುಟ್ಟಿಸಿಕೊಂಡು ನೋಡುತ್ತಾ ಮಗುವಿನ ಕೆನ್ನೆಗೆ ಛಟಾರನೆ ಹೊಡೆದು, ತಿರಸ್ಕಾರ ಕೋಪಗಳಿಂದ ನನ್ನತ್ತ ನೋಡಿ, ನನಗೆ ಹೋಗುವಂತೆ ಸನ್ನೆ ಮಾಡಿದರು. ಆತ ನನಗೇ ಹೊಡೆದಂತೆ ಭಾಸವಾಗಿ ಅಲ್ಲಿಂದ ಹೊರಟೆ. ಭಯ ಉದ್ವೇಗಗಳಿಂದ ನನ್ನ ಎದೆ ಬಡಿತ ನನಗೇ ಕೇಳುವಂತೆ ಅನ್ನಿಸಿತು.

ದಾರಿಯಲ್ಲಿ ಅಳುವುದು ಸರಿ ಅಲ್ಲ ಎಂದು ಕರ್ಚೀಫ್ ನಿಂದ ಬಾಯನ್ನು ಭದ್ರವಾಗಿ ಮುಚ್ಚಿಕೊಂಡು, ಸರಸರ ಮನೆ ಸೇರಿ, ಮನಸ್ಸು ಹಗುರವಾಗುವ ವರೆಗೂ ಬಿಕ್ಕಿ ಬಿಕ್ಕಿ ಅತ್ತೆ.........