ಶುಕ್ರವಾರ, ಡಿಸೆಂಬರ್ 20, 2019

ಭಯ'

ಒಂದು ಪುಟ್ಟ ಕಥೆ.. ಬರೀ ಕವನ ಓದಿ ಬೇಸರವಾಗಿದ್ದವರು ಓದಿ ..

ಒಂದು ಪುಟ್ಟ ಊರಿತ್ತಂತೆ. ಒಂದಿನ ಆ ಊರಿಗೆ ಒಬ್ಬ ದೊಡ್ದ ರಾಕ್ಷಸ ಬಂದನಂತೆ.. ಅವನು ಬೆಟ್ಟ ಕ್ಕಿಂತಾ ಭಾರೀ ಗಾತ್ರದವನು.. ಅವನು ಬಂದು,'' ನಾನು ಈ ಊರಿನ ಜನರನ್ನೆಲ್ಲಾ ತಿಂತೀನಿ..'' ಅಂದನಂತೆ.
ಆಗ ಜನ ''ಬೇಡಪ್ಪಾ, ನಾವೇ ದಿನಕ್ಕೊಬ್ಬರನ್ನು ಕಳಿಸ್ತೇವೆ.. ನೀವು ಆರಾಮಾಗಿ ನಿನ್ನ ಗುಹೆಯಲ್ಲಿರು...'' ಅಂದರಂತೆ..
ಅದೇ ಪ್ರಕಾರ ದಿನಕ್ಕೊಬ್ಬ ಮನುಷ್ಯ ಹೋಗುತ್ತಿದ್ದನಂತೆ. ಅವನು ಗುಹೆಯ ಬಾಗಿಲ ಬಳಿ ಹೋದ ಕ್ಷಣವೇ ಸತ್ತು ಹೋಗುತ್ತಿದ್ದನಂತೆ..
ಹೀಗಿರುವಾಗ ಆ ಊರಿಗೆ ಒಬ್ಬ ತುಂಬಾ ಧೈರ್ಯವಂತ ರಾಜಕುಮಾರ ಬಂದನಂತೆ. ಎಲ್ಲರ ಹ್ಯಾಪು ಮೋರೆ ನೋಡಿ'' ಏನಾಯ್ತು? ಯಾಕೆಲ್ಲ ಹೀಗಿದೀರಿ?'' ಅಂತ ಕೇಳಿದನಂತೆ.
ವಿಷಯ ತಿಳಿದು ಅವನು ಮರುದಿನ ಅವನೇ ಗುಹೆಯ ಬಾಗಿಲಲ್ಲಿ ನಿಂತನಂತೆ.. ನೋಡುತ್ತಾನೆ ಆ ರಾಕ್ಷಸ ಬೆಟ್ಟಕ್ಕಿಂತ ದೊಡ್ದದು!. ಆದರೂ ಏನಾಗುತ್ತೋ ನೊಡೋಣ ಅಂತ ಮುಂದೆ ನಡೆದನಂತೆ.. ಅವನು ಮುಂದೆ ಸಾಗಿದಂತೆಲ್ಲಾ ಆ ರಕ್ಕಸನ ಗಾತ್ರ ಕಡಿಮೆ ಆಗ್ತಿತ್ತಂತೆ.. ಅದರ ತೀರಾ ಸಮೀಪ ಹೋದಾಗ ಅದು ಒಂದು ಕೈಯ್ಯಲ್ಲಿ ಹಿಡಿಯುವಷ್ಟಾಯಿತಂತೆ.. ರಾಜಕುಮಾರ ಅದನ್ನು ಸಾಯಿಸುವ ಮೊದಲು ಅದನ್ನು '' ನೀನು ಯಾರು?'' ಅಂತ ಕೇಳಿದನಂತೆ
.
ಅದಕ್ಕೆ ಅದು ಉತ್ತರಿಸಿತಂತೆ..
...
....
....
...
''ನಾನು ಭಯ''

ಸಮುದ್ರಮಥನ

ಸಮುದ್ರಮಥನ

ಮರಣ ಬಾರದಂತೆ ಇರಲು
ಸುರರು ಅಸುರರಂದು ಬಯಸಿ
ಗುರುವಿನಲ್ಲಿ ಅವರ ಬಯಕೆಯನ್ನು ತಿಳಿಸಲು l
ಶರಧಿಯನ್ನು ಮಥಿಸಿ ನೀವು
ದೊರೆವುದಾಗ ನಿಮಗೆ ಸುಧೆಯು
ಇರದು ಮರಣ ಬಾಧೆ ಅದನು ಕುಡಿಯಲೆನ್ನಲುll

ಗಿರಿಯ ಶರಧಿ ನಡುವಲಿಟ್ಟು
ಉರಗವನ್ನು ಅದಕ್ಕೆ ಸುತ್ತಿ
ಭರದಿ ಕಡಲ ಕಡೆಯಲಿಕ್ಕೆ ಸಿದ್ಧವಾದರು l
ಬರದೆ ಇರಲು ಬೆಟ್ಟ ಮೇಲೆ
ಹರಿಯು ಮರುಕವನ್ನು ತಾಳಿ
ಹೊರಲು ಬಂದ ಗಿರಿಯ  ತಾನೆ ಕೂರ್ಮ ರೂಪದಿll

ನಾವು ಶಿರದ ಭಾಗವನ್ನು
ದೇವತೆಗಳು ಬಾಲವನ್ನು
ಯಾವ ಚರ್ಚೆಮಾಡದಂತೆ ಎಳೆವೆವೆನ್ನುತl
ಹಾವು ಹಿಡಿಯುತಸುರ ಸುರರು
ಧಾವತಿಯಲಿ ಮಥಿಸಲು ಸಂ
ಭಾವಿಸಿದವು ಹಲವು ದಿವ್ಯ ವಸ್ತುವಾಗಲೇll

ಇಂದು  ಬಂದ ಕಡಲಿನಿಂದ
ಚೆಂದದೈರವತವು ಬಂತು
ಬಂದನೊಬ್ಬ ದೇವ ವೈದ್ಯ ಹಿಡಿದು ಔಷಧl
ಮಂದಗಮನೆಯಾಗಿ ಬಂದ
ಇಂದಿರೆಯನು ಹರಿಯು ವರಿಸಿ
ಮುಂದೆ ದೊರೆತ ಕೌಸ್ತುಭವನು ಧರಿಸಿಕೊಂಡನುll


ಕಾಲಕೂಟ ವಿಷವು ಬರಲು
ಫಾಲನೇತ್ರ ಭರದಿ ಬಂದು
ಲೀಲೆಯಿಂದ ವಿಷವು ಕುಡಿದು ಭಯವ ಹರಿಸಿದl
ಮೇಳವಿಸುತ ಕಡೆಯುತಿರಲು
ಲೋಲಜಾಕ್ಷಿ ಮೋಹನಾಂಗಿ
ಪಾಲಗಡಲಿನಿಂದ ಸುಧೆಯ ಕಲಶ ತಂದಳುll

ಕೆಟ್ಟ ಗುಣದ ರಕ್ಕಸರಿಗೆ
ಕೊಟ್ಟುಬಿಡಲು ಸುಧೆಯ ನಾವು
ದುಷ್ಟತನದ ಜಗವಸುಡುವರೆಂದು ಚಿಂತಿಸಿl
 ಶಿಷ್ಟರಾದ ಸುರರಿಗಾಗ
 ತುಷ್ಟಳಾಗಿ ಸುಧೆಯ  ಕೊಡಲು
ಗುಟ್ಟಿನಲ್ಲಿ ರಾಹುವೆಂಬ ದೈತ್ಯ ಕುಡಿದನುll

ಭುವನವಂದ್ಯಳಾದ ದೇವಿ
ಅವನ ಮೋಸವನ್ನು ಅರಿತು
ತವಕದಿಂದ ಅವನ ರುಂಡವನ್ನು ತರಿದಳುl
ದವಡ ರಾಕ್ಷಸಾಧಮರಿಗೆ
ಅವಳು ಹರಿಯ ಮಾಯೆಯೆಂಬ
ಅವಗತಿಯನು ಕಳೆದುಕೊಂಡು ಮೂರ್ಖರಾದರುll

ಜಡತೆಯನ್ನು ತೊರೆದು ನಾವು
ಕಡೆಯುತಿರಲು ಮನದ ಶರಧಿ
ಪಡೆಯಬಹುದು ಜ್ಞಾನವೆಂಬ ದಿವ್ಯ ಸುಧೆಯನುl
ತೊಡೆದು ಕೆಟ್ಟ ಗುಣಗಳನ್ನು
ಹಿಡಿದು ಸತ್ಯ ಮಾರ್ಗವನ್ನು
ನಡೆಯುವವನು ಬಾಳಿನಲ್ಲಿ ಜಯವ ಪಡೆವನುll

ವಸುಮತಿ
೧೯-೧೨-೨೦೧೯