ಶನಿವಾರ, ಸೆಪ್ಟೆಂಬರ್ 20, 2014

ಅಲ್ಲವೆ?


`` ನೀನಿನ್ನೂ ಹಿಂದಿನ ಕಾಲದವಳ ಹಾಗಿದ್ದೀ..  ಈಗಿನ ಕಾಲದಲ್ಲಿ ಎಲ್ಲರೂ ಕುಡೀತಾರೆ, ನಾನ್ ವೆಜ್ ತಿಂತಾರೆ ...ಸ್ಮೋಕ್ ಸಹಾ ಮಾಡ್ತಾರೆ.. ಈಗ ನಾನೇ ನೋಡು ನಿಂಗಿಂತಾ ದೊಡ್ಡವಳಾದ್ರೂ ಹೇಗೆ ಹೆಪ್ ಆಗಿದೀನಿ.. ನೀನ್ಯಾಕೆ ಸ್ವಲ್ಪ ಮಾಡ್ ಆಗ್ಬಾರ್ದು....''
 ಇದು ಪಾರ್ಟಿಯೊಂದರಲ್ಲಿ ನನ್ನತ್ತ ತೂರಿಬಂದ ಪ್ರಶ್ನೆ..
``ನಿಮ್ಮ ಪ್ರಕಾರ ಕುಡಿದರೆ, ನಾನ್ ವೆಜ್ ತಿಂದರೆ, ಸ್ಮೋಕ್ ಮಾಡಿದರೆ ಮಾಡ್ರನ್ ಅಂತನ?  ನನ್ನ ಅನಿಸಿಕ ಹಾಗಲ್ಲ.. ನೀವು ನನ್ನ ಪೂರ್ವ ಕಾಲದ ಪುಟ್ಟಮ್ಮ ಅಂತನೇ ಅನ್ನಿ.. ಚಿಂತೆ ಇಲ್ಲ.. '' ಅಂದೆ  ನಗ್ತಾ.
ನನ್ ಪ್ರಕಾರ ಮಾಡ್ರನ್ ಆಗಿರೋದಂದರೆ. ಹಿಂದಿನ ಕಾಲದಿಂದ ಬಂದ ಮೂಢನಂಬಿಕೆಗಳನ್ನು ``ಅಜ್ಜ ಹಾಕಿದ ಆಲದ ಮರಕ್ಕೆ ನೇತು ಬೀಳೊ ..'' ಥರ ನಂಬದೇ ಅದನ್ನು ವಿಚಾರದ ಒರೆಗೆ ಹಚ್ಚಿ ನಂಬುವುದು.. ಹಿಂದಿನಿಂದ ಬಂದ ಜಾತೀಯತೆಯಂಥ ಸಾಮಾಜಿಕ ಪೀಡೆಗಳನ್ನು ವಿರೋಧಿಸುವುದು..

 ಒಟ್ಟಿನಲ್ಲಿ ಹಿಂದಿನವರು ಮಾಡಿದ ಯಾವ ಯಾವ ಕೆಲಸಗಳು ತಪ್ಪು ಎಂದೆನಿಸುತ್ತೋ ಅದನ್ನು ಪುನರಾವರ್ತಿಸದೇ,  ನಮ್ಮ ಮನ:ಸ್ಸಾಕ್ಷಿ ಮೆಚ್ಚುವಂತೆ ಜೀವಿಸುವುದು...

ಹೀಗಾದರೆ ಹೇಗೆ?

`` ಗಾಂಧೀಜಿಯವರ ಜನ್ಮದಿನ ಯಾವತ್ತು? ಅವರು ಬರೆದ ಪುಸ್ತಕ ಯಾವುದು?'' ಇಂಥ ಸರಳ ಪ್ರಶ್ನೆಗಳಿಗೂ  ನಮ್ಮ ಶಿಕ್ಷಕರು ಉತ್ತರ ಕೊಡಲು ಅಸಮರ್ಥರಾಗಿ ತಡವರಿಸಿದರೆಂಬ ಪತ್ರಿಕಾ ವರದಿ  ನಿಜಕ್ಕೂ  ಚಿಂತೆಗೀಡುಮಾಡಿತು.. ಇದು ಶಿಕ್ಷಕ ಸಮುದಾಯವೇ ತಲೆ ತಗ್ಗಿಸುವಂಥದ್ದು..


 ಶಿಕ್ಷಕರ ಕೆಲಸ ಅತ್ಯಂತ ಜವಾಬ್ದಾರಿಯಿಂದ ಕೂಡಿದ್ದು ಅವರು ಅದನ್ನು  ತುಂಬಾ ಶ್ರದ್ಧೆಯಿಂದ ಮಾಡಬೇಕು.. ಅದಕ್ಕಾಗಿ ಪ್ರತೀ ದಿನವೂ  ಕಲಿಯುತ್ತಿರುವ ಅನ್ವೇಷಿಸುವ  ಕುತೂಹಲಭರಿತ  ಮನಸ್ಸಿರಬೇಕು.. ಪ್ರತೀ ತರಗತಿಯನ್ನು ತೆಗೆದುಕೊಳ್ಳುವ ಮೊದಲೂ ಅಧ್ಯಯನ ಮಾಡುವುದೂ ಅಗತ್ಯವಲ್ಲದೇ ಮಕ್ಕಳು ಕೇಳಬಹುದಾದ ಎಲ್ಲಾ ಬಗೆಯ ಪ್ರಶ್ನೆಗಳಿಗೂ ಉತ್ತರಿಸುವ ಸಿದ್ಧತೆ ಕೂಡಾ ಮಾಡಿಕೊಳ್ಳಬೇಕಾಗುತ್ತದೆ.. ಹಾಗೂ ಯಾವುದೇ ಪ್ರಶ್ನೆಗೆ ಉತ್ತರ ತಿಳಿಯದಿದ್ದರೆ/ನೆನಪಿಗೆ ಬಾರದಿದ್ದರೆ  `` ನನಗೆ ತಿಳಿದಿಲ್ಲ/ನೆನಪಿಲ್ಲ  ತಿಳಿದ್ ಹೇಳುತ್ತೇನೆ...'' ಎಂದು ಹೇಳುವ ಪ್ರಾಮಾಣಿಕತೆ ಹಾಗೂ  ಆ ಮಾತನ್ನು ಉಳಿಸಿಕೊಳ್ಳುವ  ಬದ್ಧತೆ ಬೇಕು..  ಆಗ ಯಾರೂ ಉತ್ತಮ ಶಿಕ್ಷಕ ಎಂದು ಹೊಗಳದಿದ್ದರೂ   ಮನಸ್ಸಾಕ್ಷಿ   ಒಪ್ಪುತ್ತದೆ ..ಅಲ್ಲವೇ ?

ಬಾಹ್ಯ ರೂಪ

ಹಿಂದೆ ಹುಡುಗರು `` ಈ ಹುಡುಗಿ ಚನ್ನಾಗಿಲ್ಲ, ಕಪ್ಪಗಿದ್ದಾಳೆ, ಕುಳ್ಳಗಿದ್ದಾಳೆ.. '' ಹೀಗೆ ಏನೇನೋ ನೆಪ ಒಡ್ಡಿ ಮದುವೆಯಾಗಲು ನಿರಾಕರಿಸುತ್ತಿದ್ದರು.
ಅದಕ್ಕೂ ಹಿಂದೆ ಹುಡುಗಿಯರಿಂದ ಹಾಡು ಹೇಳಿಸಿ , ಪುಸ್ತಕ ಓದಿಸಿ, ಅವರ ಕೈಕಾಲು ಊನವಿಲ್ಲ ಎಂದು ಖಾತ್ರಿ ಪಡಿಸಿಕೊಳ್ಲಲು ನಡೆದಾಡಿಸಿ, ಕಣ್ಣು ಕಾಣ್ತದ ಇಲ್ಲವ ಎಂದು ಪರೀಕ್ಷಿಸಲಿಕ್ಕಾಗಿ ಸೂಜಿಗೆ ದಾರ ಪೋಣಿಸಲು ಹೇಳಿ ನಂತರ  ಹೆಣ್ಣನ್ನು ಒಪ್ಪುತ್ತಿದ್ದರಂತೆ!!
 ಈಗ ಆ ಸರದಿ ಹುಡುಗಿಯರದ್ದಾಗಿದೆ.. ಅವರು ಚಿಕ್ಕ ಚಿಕ್ಕ ಕಾರಣಗಳಿಗೆ ಹುಡುಗರನ್ನು ನಿರಾಕರಿಸುವುದು ನೋಡಿದಾಗ ``ಇದಂತೂ ಅತಿ..'' ಅನಿಸುತ್ತದೆ..
ಅಲ್ಲವೆ?
 ಯಾಕೆ ಜನರು ಅನಿತ್ಯವೂ ಅಶಾಶ್ವತವೂ ಆದ ಬಾಹ್ಯ ರೂಪಕ್ಕೆ ಇಷ್ಟೊಂದು  ಪ್ರಾಮುಖ್ಯ ಕೊಡುತ್ತಾರೆ?
 ನಾವು ಸುಂದರವಾಗಿದ್ದೇವೆಂದು ಮೆರೆಯುವುದೂ, ಇಲ್ಲವೇ ಚನ್ನಾಗಿಲ್ಲವೆಂದು ಕೊರಗುವುದು ಎರಡೂ ಅರ್ಥಹೀನ ಎಂದು ನನ್ನ ನಂಬಿಕೆ..  ಯಾಕೆಣ್ದರೆ ನಮ್ಮ ರೂಪ ಅದು ಹೇಗೇ ಇರಲಿ ಅದಕ್ಕೆ  ನಾವು ಹೊಣೆಯಲ್ಲ..  ದೈವಸೃಷ್ಠಿಯಾದ ಈ ದೇಹವನ್ನು ಅದು ಹೇಗಿದೆಯೋ ಹಾಗೇ ಗೌರವಿಸಬೇಕು,,
 `ಶರೀರಮಾಧ್ಯಂ ಖಲು ಧರ್ಮ ಸಾಧನಂ..' ಎಂಬಂತೆ ಅದನ್ನು ಜೋಪಾನವಾಗಿ, ರೋಗಗಳಿಗೆ ಬಲಿಯಾಗದಂತೆ ಕಾಪಾಡಿಕೊಂಡು, ಅದು ಸತ್ಕಾರ್ಯಗಳನ್ನು ಮಾಡಲಿಕ್ಕೆ ಸಮರ್ಥವಾಗಿಟ್ಟುಕೊಳ್ಳಬೇಕೆಂಬುದು ನನ್ನ ನಂಬಿಕೆ...


ಅಲ್ಲವೆ?

`ನಾವು ನಿಮ್ಮ ರಕ್ಷಕರು''

`` ನಮಸ್ಕಾರ ಇನ್ಸ್ಪೆಕ್ಟರ್ ಸರ್.  ನನ್ ಹೆಸರು ರಾಮ್ ಪ್ರಸಾದ್... ಇಲ್ಲಿ ತುಂಬಾ ಗಲಾಟೆ ನಡೀತಿದೆ.. ನೀವು ಬೇಗ ಬರ್ದಿದ್ರೆ ಅನಾಹುತಾನೇ ಆಗಬಹುದು  ಬೇಗ್ನೇ ಬನ್ನೀ ಸರ್ ..ಪ್ಲೀಜ್...' ಪೋಲೀಸ್ ಸ್ಟೇಶನ್ ಗೆ...
.ಕಾಲ್ ಬಂದ ಕೂಡಲೇ ಇನ್ಸ್ಪೆಕ್ಟರ್  ಧಾವಿಸಿದರು ಜೀಪ್ ನಲ್ಲಿ...
``ಯಾರ್ರೀ ರಾಮ್ ಪ್ರಸಾದ್...''?  
ಗಡಸು ದನಿ ಕೇಳಿ ಹದಿನೆಂಟರ ಹುಡುಗ ಓಡಿ ಬಂದ...
`` ನಾನೇ ಸರ್, ನಾನೇ ಕಾಲ್ ಮಾಡಿದ್ದು...... ನಿಮ್ಮ ಜೀಪ್ ನೋಡಿ ರೌಡಿಗಳೆಲ್ಲ ಓಡಿ ಹೋದ್ರು ಸರ್.. ಥ್ಯಾಂಕ್ಸ್ ಸರ್ ಸಮಯಕ್ಕೆ ಸರಿಯಾಗಿ ಬಂದು ಆಗೋ ಅನಾಹುತನ ತಪ್ಪಿಸಿದ್ರಿ.. '' 
 `ನಾನೇ ಕಾಲ್ ಮಾಡಿದ್ದು ' ಅನ್ನೋ ಹೆಮ್ಮೆ` ಎಂಥ ಗಲಾಟೆ ಆಯ್ತಲ್ಲ!?'  ಅನ್ನೋ ಆತಂಕ, ` ಸಧ್ಯ ತಪ್ಪಿ ಹೋಯ್ತಲ್ಲ...'  ಅಂತ ನಿರಾಳತೆ, ಕೃತಜ್ಞತೆ ಎಲ್ಲ ಇತ್ತು ಅವನ ಧ್ವನಿಯಲ್ಲಿ..
 `` ಎ! ಏನೋ ' ಪೋಲೀಸ್ರ ಜೊತೆ ಆಟ ಆದ್ತಿದ್ದೀಯಾ? ನಡೀ ಸ್ಟೇಶನ್ ಗೆ ಅಂತ ಕತ್ತಿನ ಪಟ್ಟಿಗೆ ಕೈ ಹಾಕಿದ್ರು...
  ಆಗ ಅಲ್ಲಿದ್ದ ಹಿರಿಯರು `` ಸರ್ ಅವನದ್ದೇನೂ ತಪ್ಪಿಲ್ಲ.. ಏನಾಗುತ್ತೋ.. ಅನ್ನೋ ಭಯದಲ್ಲಿ ಇಂಥ ಸಂದರ್ಭದಲ್ಲಿ ಪೋಲೀಸರನ್ನು ಕರೀಬೇಕಂತ ಹೇಳಿದ್ದು ನಾನೇ.. ಅವನ ಟೀಚರ್...''
'' ಓ.. ಇದರಲ್ಲಿ ನಿಮ್ ಕೈವಾಡನೂ ಇದ್ಯ? ನೀವೂ ಹತ್ತಿ...
  ``ಅಯ್ಯೋ!! ಅವನನ್ನು ಬಿಟ್ಬಿಡಿ ಸರ್.. ಅವಂಗೇನೂ ಗೊತ್ತಿಲ್ಲ .. ತಿಳೀದೆ ತಪ್ ಮಾಡಿದಾನೆ  '' ಕಣ್ಣೀರಿಡ್ತಾ ಬಂದು ಕಾಲು ಹಿಡಿದ ತಂದೇನೂ ಹತ್ತಿಸಿಕೊಂಡು  ಪೋಲೀಸ್ ಜೀಪ್ ಸ್ಟೇಶನ್ ಗೆ ಹೋಯ್ತು..
ಛಟ್!! ಛಟಾರ್!... ...''
`` _________________ ಮಗನೆ ' ಪೋಲೀಸ್ ಜೊತೆ ಹುಡುಗಾಟ ಆಡ್ತೀಯಾ?   ನಾವೇನು ನಿನ್ನ ಆಳುಗಳಾ?...""
  ಸಂಬಂಧಿಕರು ಆ ಮೂವರನ್ನೂ ಇದ್ದಬದ್ದ ಹಣವನ್ನೆಲ್ಲಾ ಕೊಟ್ಟು ಬಿಡಿಸಿಕೊಂಡು ಹೋಗುವಲ್ಲಿ ಅರ್ಧ ಜೀವವಾಗಿದ್ದರು. ಆ ಮೂವರೂ.. ಹೊರಗೆ ಬಂದು  ನಿಟ್ಟುಸಿರಿಟ್ಟು ನೋಡಿದಾಗ  ಕಲಾವಿದನೊಬ್ಬನ ಸುಂದರ ಕೈಬರಹದಲ್ಲಿ ರಾರಾಜಿಸುವ ಬೋರ್ಡ್ ಕಂಡಿತು

``ನಾವು ನಿಮ್ಮ ರಕ್ಷಕರು''

` ನಿಮಗೆ ಸಹಾಯ ಬೇಕೇ?'' ಸಾರ್ವಜನಿಕರ ಸೇವೆಯೇ ನಮಗೆ ಪೂಜೆ!!''

ನೆನಪಿನ ಪುಟಗಳಿಂದ


ಇವತ್ತಿನ ಹಾಗೇ ಅವತ್ತೂ ಮಡಿಯಲ್ಲಿ ಅಡುಗೆ ಮಾಡ್ತಿದ್ದೆ.. ನನ್ನ ಮಗಳು ಬಂದು ಮುಟ್ಟಿದಳು.
ಅಮ್ಮ,`` ಏನು ಈಗಿನ ಕಾಲದ ಮಕ್ಳೋ.. ಮಡಿ ಇಲ್ಲ, ಮೈಲಿಗೆ ಇಲ್ಲ....'' ಅಂತ ಸಿಡುಕಿದರು... ಅದಕ್ಕೆ ಇವಳು `` ಅಜ್ಜೀ, ಮಡೀನೂ ಇಲ್ಲ, ಮೈಲಿಗೇನೂ ಇಲ್ಲ,, ಹಾಗಾದ್ರೆ ಏನಿದೆ? '' ಅಂತ  ಮಾಮೂಲಿ ತುಂಟತನದ ಪ್ರಶ್ನೆ ಹಾಕಿ ಅಮ್ಮನ್ನ ಮುಜುಗರಕ್ಕೀಡು ಮಾಡಿದಳು.. `` ತಲೆ ಹರಟೆ ಮಾಡ್ಬೇಡ ಹೋಗು...'' ಅಂತ ಗದರಿದೆ ನಾನಾಗ..
ಆದರೂ ಅವಳ ಪ್ರಶ್ನೆಯಿಂದ ಬಂದ ನಗುವನ್ನು ಅಡಗಿಸಿಕೊಳ್ಳಲಿಕ್ಕೆ ಕಷ್ಟವಾಯ್ತು.. ಅಲ್ಲದೇ ನಾನು ನಗೋದು ಅಮ್ಮ ನೋಡಿದರೆ ಅನ್ನೋ ಆತಂಕದಿಂದ ಅವರತ್ತ ನೋಡಿದೆ.. ಅವರೂ ತಮ್ಮ ನಗುವನ್ನು ಅದುಮಿಡಲಿಕ್ಕೆ ಹೆಣಗ್ತಿರೋದು ಕಂಡು ನಗುಬಂತು.. ಇಬ್ಬರೂ ಒಬ್ಬರನ್ನೊಬ್ಬರು ನೋಡಿ ನಕ್ಕುಬಿಟ್ಟೆವು..
ಅದನ್ನು ಗಮನಿಸಿ  ಮತ್ತೆ ಕೇಳಿದಳು, `` ಅಜ್ಜೀ, .... ನಾನು ಅಮ್ಮನ್ನ ಮುಟ್ಟಿದರೆ ಅವರು ಮೈಲಿಗೆ ಆಗ್ತಾರೆ. ಅಮ್ಮಾನೇ ನನ್ನ ಮುಟ್ಟಿದ್ರೆ ನಾನ್ ಮಡಿ ಆಗ್ತೀನ?...''
ಹಟಾತ್ತನೆ ಬಂದ ಪ್ರಶ್ನೆಗೆ ಅಮ್ಮ ತಬ್ಬಿಬ್ಬಾದ್ರು..
ನಾನು ಅನಿವಾರ್ಯವಾಗಿ, `` ಹೋಗೇ .. ತಲೆ ಪ್ರತಿಷ್ಠೆ ಮಾಡ್ಬೇಡ... ದೊಡ್ಡವರಂದ್ರೆ ಭಯ ಇಲ್ಲ, ಭಕ್ತಿ ಇಲ್ಲ ....'' ಅಂತ ಅಮ್ಮನ ಸ್ಟಯಿಲ್ ನಲ್ಲೇ ಗದರಿದೆ.....''
ನಂತರ. ಮುಂದೆ  ಉತ್ತರಿಸಬೇಕಾಗುವ most expected questions
`` ಅಮ್ಮಾ ಹರಟೋದು ಬಾಯಲ್ಲಿ ತಾನೆ? ಮತ್ಯಾಕೆ ತಲೆ ಹರಟೆ ಅಂತಾರೆ?
ತಲೆ ಪ್ರತಿಷ್ಠೆ ಅಂದ್ರೇನು? ಕೈ, ಕಾಲು ಪ್ರತಿಷ್ಠೆ ಅಂತ ಯಾಕಿಲ್ಲ?

ಇತ್ಯಾದಿ ಪ್ರಶ್ನೆಗಳಿಗೇನು ಉತ್ತರಿಸಲಿ ಅಂತ ಯೋಚಿಸ್ತಾ ನನ್ನ ಅಡುಗೆ ಮುಂದುವರೆಸಿದೆ.....

ಹೀಗೊಂದು ಜಾಹೀರಾತು:


 ಗಾಂಧಾರಿ ಬಳಸುತ್ತಿದ್ದ  ಲಕ್ಷಾಂತರ ಕಣ್ಣಿಗೆ ಕಟ್ಟುತ್ತಿದ್ದ ಬಟ್ಟೆಗಳು ದೊರೆತಿವೆ!! ಅಮೂಲ್ಯವಾದ ರೇಶ್ಮೆ ಬಟ್ಟೆಗಳು, ಮನಮೋಹಕ ಬಣ್ಣಗಳಲ್ಲಿ, ಸುಂದರ ಕಸೂತಿಗಳನ್ನೊಳಗೊಂಡ ಬಟ್ಟೆಗಳು ಈಗ   ಮಾರಾಟಕ್ಕಿವೆ.....
  ಉಪಯೋಗಗಳು ಏನೆನ್ನುವಿರಾ?
ಒಂದೇ ಎರಡೇ?  ಹಲವಾರು ..ನೀವಿದನ್ನು ಕಣ್ಣಿಗೆ ಕಟ್ಟಿಕೊಂದರೆ ನಿಮ್ಮ ಸುಂದರ ಕಣ್ಣುಗಳಿಗೆ ಕಸ ಬೀಳದು..  ಸೂರ್ಯನಿಂದ ಬರುವ  ಅತಿ ನೇರಳೆ ಕಿರಣಗಳಿಂದ ರಕ್ಷಣೆ.. ನಿಮ್ಮ  ಉಡುಪಿಗೆ ಸರಿಯಾದ ಮ್ಯಾಚಿಂಗ್ ಕಣ್ಣು ಪಟ್ಟಿ ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ
 ಅಷ್ಟೇ ಅಲ್ಲ..
 ನಿಮ್ಮ ಸುತ್ತಮುತ್ತ ಇರುವವರ ಮುಖದಲ್ಲಿ ನಿಮ್ಮಬಗ್ಗೆ ತಿರಸ್ಕಾವೋ. ಅಸೂಯೆಯೋ, ಕ್ರೋಧವೂ ಇದ್ದರೆ ಅದು ನಿಮಗೆ ಕಾಣುವುದಿಲ್ಲ..
ಇನ್ನೂ ಇದೆ..
ಸುತ್ತಾ ನಡೆಯುವ  ಆರಕ್ಷಕರ ಅವ್ಯವಹಾರಗಳು ,  ಮಂತ್ರಿಗಳ ಮೋಸಗಳು,   ದೇಶ ಸೇವೆಯ ಹೆಸರಲ್ಲಿ ದೌರ್ಜನ್ಯಗಳು, ರಾಜ ಕಾರಣದ ಹುಳುಕು ಕೊಳಕುಗಳು  ನಿಮಗೇ ಕಾಣಿಸದೇ ಕಾಣಿಸದು..
 ನೀವು ಆರಾಮವಾಗಿ ``ನಾನು ರಾಮ ರಾಜ್ಯದಲ್ಲಿದ್ದೇನೆ ...''ಎಂಬ ಸುಂದರ ಭ್ರಮಾ ಲೋಕದಲ್ಲಿ ವಿಹರಿಸುತ್ತಿರಬಹುದು.
 ಬೇಕಿದ್ದರೆ ಸಂಪರ್ಕಿಸಿ..
 ವಿ.ಸೂ.. ಕಪ್ಪು ಪಟ್ಟಿ ಮಾತ್ರ ಲಭ್ಯವಿಲ್ಲ.. ಅದನ್ನು ನ್ಯಾಯದೇವತೆ ತುಂಬಾ ಹಿಂದೇ  ತೆಗೆದುಕೊಂಡಿದ್ದಾಳೆ...


ಶುಕ್ರವಾರ, ಸೆಪ್ಟೆಂಬರ್ 19, 2014

ಚುಟುಕಗಳು

ಮೌನದಲಿ ನೂರಾರು ಮಾತುಗಳು ಇರುವಾಗ
ಸುಮ್ಮನೇ ವ್ಯರ್ಥ ಮಾತೇಕೆ ಬೇಕು?
ನನ್ನ ಮನಸಿನ ಭಾವ ನಿನಗರ್ಥವಾಗಿರಲು
ಒಂದು ಚೆಂದದ ಮುಗುಳುನಗೆಯಷ್ಟೆ ಸಾಕು

ನಿಶ್ವಾಸ ಉಚ್ಛ್ವಾಸದಂತೆಯೇ ಅನಿವಾರ್ಯ
ವಿಶ್ವಾಸವೆನುವ ವೈಡೂರ್ಯ ಜಗದೆ
ಆಶ್ವಾಸ ನೀಡುವುದು ಆಹ್ಲಾದ ತುಂಬುವುದು
ವಿಶ್ವದಲಿ ವಿಷಮತೆಯನಳಿಸಿ ಮುದದೆ

ಬೇಕಿಲ್ಲ ಅಮ್ಮನಿಗೆ ದೇವತೆಯ ಸ್ಥಾನ
ಸಾಕು ಅವಳಿಗೆ ನಮ್ಮ ಪ್ರೀತಿ ಅಭಿಮಾನ
ಆಶಿಸಳು ಯಾವುದೇ ಬಗೆಯ ಹೊಗಳಿಕೆಯ
ನೀಡಿದರೆ ಸಾಕವಳಿಗಾಗಿ ತುಸು ಸಮಯ

ಮುರಳಿಲೋಲನು ತೊರೆದ ಮುರಳಿ ಗಾನವು ಇರದೆ
ದ್ವಾಪರದಲಿತ್ತು ಒಂದೇ ಗೋಕುಲ
ಎಲ್ಲ ಮಕ್ಕಳು ದೂರ ದೇಶದಲ್ಲಿ ನೆಲೆಸಿಹರು
ಇಂದು ಪ್ರತಿ ಮನೆಯಲೂ ಅದೇ ವ್ಯಾಕುಲ

ತಾಯ ಪ್ರೀತಿಯು ಕಡಲ ಬಿತ್ತರ
ತಂದೆ ಹಿಮಗಿರಿಯೆತ್ತರ
ಅದಕೆ ಅದೆ ಸರಿ ಇದಕೆ ಇದೆ ಸರಿ
ಉಂಟೆ ಹೋಲಿಕೆ, ಅಂತರ?

ವೃತ್ತದೊಲು ತಾಯೊಲುಮೆ ಇಲ್ಲ ಕೊನೆ ಮೊದಲು
ಸುತ್ತಲೂ ಪಸರಿಪುದು ಸಂತಸದ ಹೊನಲು
ಅವಳಾತ್ಮ ನಲಿಯುವುದು ಶಿಶು ಸೌಖ್ಯದಲ್ಲಿ
ಬೆಳಕವಳು ಕಂದನಾ ಬಾಳಹಾದಿಯಲಿ

ಉಕ್ಕುತಿದೆ ಮನದಲ್ಲಿ ನೂರಾರು ಕವನಗಳ
ಸೃಷ್ಠಿಮಾಡುವ ಭಾವ ಸಂಭ್ರಮದ ಒರತೆ
ಕಾಗದದ ಮೇಲದನು ಬರೆಯಬೇಕೆಂದರೆ
ಎಷ್ಟು ಅಡೆತಡೆಗಳೋ! ಪದಗಳದೆ ಕೊರತೆ

ಕೇಳಲಿಕ್ಕೆ ಹಿತವಾಗಿದ್ದರೆ ಮಾತು 
ಕೇಳುವವರಿಗೂ ಆಡುವವರಿಗೂ ಭೂಷಣ....
ಇಲ್ಲವಾದರೆ ಕೇಳಲಿಕ್ಕೆ ಅಂತೂ ಭೀಷಣ 
ಆಡುವವರಿಗೆ ಹೇಗೋ ಗೊತ್ತಿಲ್ಲಣ್ಣ

ಕ್ಷೀರ ಸಾಗರವನ್ನು ಮಥಿಸಿದುದರಿಂದಲೇ
ದೇವಲೋಕದ ಸುಧೆಯು ಉತ್ಪನ್ನವಾಯ್ತು
ಕಾವ್ಯವೆನ್ನುವ ಅಮೃತ ಸೃಜಿಸಬೇಕಾದರೆ
ಕವಿ ಹೃದಯದಲಿ ನಡೆವ ಮಥನವೇ ಹೇತು

ಎಲ್ಲೊ ಸಂಪಿಗೆಯರಳಿ ಪರಿಮಳವ ಬೀರಿದರೆ
ಇಲ್ಲಿ ಈ ಮನದಲ್ಲಿ ಮೃದು ಸ್ಪಂದನ
ಮಲ್ಲೆ ಸಂಪಿಗೆ ಇರಲಿ ಚಲ್ವ ಜಾಜಿಯೆ ಇರಲಿ
ಒಲುಮೆ ತುಂಬಿದ ಮನದಿ ಹೊಸ ಕಂಪನ

ಬುಧವಾರ, ಸೆಪ್ಟೆಂಬರ್ 17, 2014

ವರ

ಜೊತೆಯಲ್ಲಿ ಓದುತ್ತಿದ್ದ ಒಂದೇ ವಯಸ್ಸಿನ ತರುಣ ತರುಣಿಯ ನಡುವೆ ಪ್ರೀತಿ ಹುಟ್ಟಿತು.. ಇಬ್ಬರೂ ಇಪ್ಪತ್ತು ವರ್ಷವಾದಾಗ  ಮದುವೆಯಾದರು.. ನಲವತ್ತು ವರ್ಷಗಳ ಕಾಲ  ಸಂಸಾರ ಮಾಡಿದರು.. ಅದೂ ಅನ್ಯೋನ್ಯವಾಗಿ!!..
 ಇದನ್ನು ಮೆಚ್ಚಿ ಭಗವಂತ ಪ್ರತ್ಯಕ್ಷನಾದ..
 `` ಮಕ್ಕಳೇ ನಿಮ್ಮ ಅನ್ಯೋನ್ಯತೆಯನ್ನು ಮೆಚ್ಚಿದ್ದೇನೆ ನಿಮಗೇನು ವರ ಬೇಕೋ ಕೇಳಿ.. ಓಕೆ.. ಲೇಡೀಸ್ ಫಸ್ಟ್ ನೀನು ಕೇಳಮ್ಮ.. '' ಅಂತ  ಆ  ಅರವತ್ತರ ಮುತ್ತೈದೆಯನ್ನು ಕೇಳಿದ..
``   ದೇವಾ ನಾನು  ನನ್ನ ಗಂಡನ ಜೊತೆ ವರ್ಲ್ಡ್ ಟೂರ್ ಮಾಡಬೇಕನ್ನೋದೇ ನನಗಿರೋ ಆಸೆ.. ಈಡೇರಿಸು ತಂದೇ..'' ಬೇಡಿದಳು ಆಕೆ..
 ಗಂಡ ಮನದಲ್ಲೇ `` ವರ್ಲ್ಶ್ ಟೂರ್ ಓಕೆ.. ಆದ್ರೆ ಛೀ!! ಈ ಮುದುಕಿ ಜೊತೆನಾ?    ಬೇಡಪ್ಪ.. ''
 ದೇವ,ರು`` ನಿನಗೇನು ಬೇಕು ಮಗೂ..'' ಅಂದ.
 ``ದೇವರೇ,  ನನ್ನ ಜೊತೆ ವರ್ಲ್ಡ್ ಟೂರು ಮಾಡೋ ನನ್ನ ಹೆಂಡತಿ ನನಗಿಂತ ಮೂವತ್ತು ವರ್ಷ ಚಿಕ್ಕವಳಾಗಿರಬೇಕು....''
 ಅಂತ ಹೆಂಡತಿಯನ್ನು ತಿರಸ್ಕಾರದಿಂದ ನೋಡುತ್ತ.. ತಥಾಸ್ತು.. ದೇವರು ಮಾಯವಾದ.
   ಇದೇನು ಪಕ್ಕದಲ್ಲಿ ಅದೇ ಹೆಂಡತಿ ಇದಾಳೆ? ಆದರೆ ನನಗಿಂತ ಎತ್ತರವಾಗಿ ಕಾಣ್ತಾಳೆ?  ದೇವರು ಮೋಸ ಮಾಡಿದನ? ಸಂದೇಹದಿಂದ ಕನ್ನಡಿ ನೋಡಿದ..
 ಅರೇ!! ಇದೇನಾಯ್ತು?


 ಅವನು ತುಂಬತ್ತು ವರ್ಷದ ಬೆನ್ನು ಬಾಗಿದ ಮುದುಕನಾಗಿದ್ದ

ಗುರುವಾರ, ಮೇ 15, 2014

ಒಂಟಿ ಲಲನೆ

ಬಿಸಿಲ ಭೀಕರತೆಯಲೂ ಒಳಗೊಳಗೆ ಸಂಭ್ರಮಿಸಿ
ಒಬ್ಬಂಟಿಯಾದರೂ ಒಂಟಿಯಲ್ಲದ ಲಲನೆ
ಸುಡುವ ಬಿಸಿಲಿನ ಬೇಗೆಯಲಿ ಸುಖವಾಗಿ ಸಾಗುವಳು
 ಜೊತೆಯಲ್ಲಿ ಮನದಲ್ಲಿ ಇರಲು ಅವನೆ
ಅವನ ಹಸ್ತ ಸ್ಪರ್ಶ  ಹೃದಯಕ್ಕೆ ಸುಮ ಸ್ಪರ್ಶ
ರಾಗಸಂಗಮ ನೂರು ಭಾವಗೀತೆ
ಅವನೊಡನೆ ಇದ್ದ ಪ್ರತಿ ಘಳಿಗೆಯೂ ಹೊಸ ಬಯಕೆ
ಏನೋ ಹೊಸ ಕನಸುಗಳ ಹೆಣೆಯುತ್ತಿವೆ
 ಏಕಾಂಗಿತನದಲೂ ಜೊತೆಯಲ್ಲಿವೆ
 ಮಂದ ಮಾರುತ ಹೊತ್ತು  ತಂದ ಆ ಪಿಸುಮಾತು
ಹಾಡುತಿವೆ ಅವನೆ ರಚಿಸಿದ ಪ್ರೇಮ ಕವನ
ಕಾಮದಾ ಕೊಳಕಿರದ ಶುದ್ಧ ಚೈತನ್ಯಮಯ
ನಿರ್ಭೀತ ದೃಢಮನದಿ ಹಿತ ಕಂಪನ



ಮಾತೆಯೊಬ್ಬಳ ಮನದಳಲು



ಹೇಗೆ ನಂಬಲಿ ಹೇಗೆ ನಂಬದೇ ಇರಲಿ?
ಕಣ್ಣಿಂದ ಕಂಡದ್ದೆ ಕಿವಿಯಿಂದ  ಕೇಳಿದ್ದೆ?
ಇಂದ್ರಿಯಗಳನುಭವವೆ? ಮನಕಾದ ನಲಿವೆ?

ಅಂದು ತಾಯಾಗುವೆನು ಎಂಬ ಅನುಭೂತಿ ನಿಜ
ಗರ್ಭಸ್ಥ ಶಿಶು ಒದೆದ ರೋಮಾಂಚ ಸತ್ಯ
ಯಾತನೆಯ ನಂತರದ ಮಾಯಕದ ಮತ್ತಳಿದು
 ತೊಳೆದ ಮುತ್ತಂಥ ಮಗು  ಕಂಡದ್ದು ಸತ್ಯ

 ಬೆಣ್ಣೆಯಂತಹ ಕಂದನಾಡಿದ್ದ ತುಂಟಾಟ
ಹೃನ್ಮನವ ತಣಿಸಿ ಮುದಗೊಳಿಸಿದ್ದು ಸುಳ್ಳೇ?
ಇವ ನಿನ್ನ ಮಗನಲ್ಲ ಅವನವ್ವೆ ಇಹಳೆಲ್ಲೋ
ಎನಲು ನಾನದನು ನಂಬಲಿ ನೀನೆ ಹೇಳೇ?

ನಂಬದೆಲು ಇರಲಾರೆ, ನಂಬಿ ದು:ಖಿಸಲಾರೆ
 ನನ್ನ ಮನದಳಲನ್ನು ಬಲ್ಲೆಯಾ ಗೆಳತಿ?
ಇದನೆನಗೆ ಅರುಹಿದವರೆಂದು  ಕನಸಲ್ಲಿಯೂ
 ಅನೃತವನು ನುಡಿಯಲಾರದ ನನ್ನ ಪತಿ


ನಿರಾಸೆ

ಅಂದು....
ಅವ ನನ್ನ ನೋಡಿ
ಮುಗುಳ್ನಕ್ಕ..
 ನಾನು ಪ್ರತಿ ನಗಲಿಲ್ಲ..

ನನಗಾಗಿ
ಕವನ ಬರೆದ..
ನಾನೋದಲಿಲ್ಲ...
.
ನನಗಾಗಿ ನದಿ ತೀರದಿ
 ಕಪ್ಪೆ ಗೂಡು ಕಟ್ಟಿದ
ನಾ ಗಮನಿಸಲಿಲ್ಲ...

ನನಗಾಗಿ ಪ್ರೇಮ
ಕವನ ಹಾಡಿದ
 ನಾನಾಲಿಸಲಿಲ್ಲ..

ನನಗಾಗಿ
ಮಲ್ಲಿಗೆ ತಂದ
ನಾ ಮುಡಿಯಲಿಲ್ಲ..

ಅವನ ಅನುರಾಗಕ್ಕೆ
ದನಿಯಾಗಲಿಲ್ಲ...

ಕೊನೆಗೆ....
 ಯೋಧಾನಾಗುವೆನೆಂದು
ವಿದಾಯ ಹೇಳಲು ಬಂದ..
ನಾ ಬೇಡವೆಂದು ಗೋಗರೆದೆ
ಅವ  ದೃಢ ಚಿತ್ತ
ಕೇಳಲಿಲ್ಲ
ಜಾಗ್ರತೆಯಾಗಿ ಬೇಗ ಬಾ 
ಎಂದು ಅಂಗಲಾಚಿಗೆ
ನಿಷ್ಕರುಣಿ
ಬರಲೇ ಇಲ್ಲ....


ಕಥೆ

ಕಥೆ
 ಗಾಢವಾದ ನಿದ್ರೆಯಲ್ಲಿದ್ದಾಗ ಇದ್ದಕ್ಕಿದ್ದ ಹಾಗೆ ರಿಂಗ್ ಆದ ಸದ್ದಿಂದ ಎಚ್ಚರ ಆಯ್ತು.. ` ಅಲಾರಾಂ?? ಇಲ್ಲ ಇದು ಯಾವುದೋ ಕಾಲ್ ಬಂದ ಶಬ್ದ. ಗಡಿಯಾರ ನೋಡಿದೆ.. ರಾತ್ರಿ ಒಂದು ಗಂಟೆ..ಎದೆ ಧಗ್ ಅಂತು... ಫೋನ್ ರಿಸೀವ್ ಮಾಡ್ತಾ ಇವರ ಕಡೆ ನೋಡ್ದೆ..   ಒಳ್ಳೇ ನಿದ್ರೆಲಿದ್ದರು.. `ಹಲೋ' ಅಂದ ತಕ್ಷಣ  `ಅಮ್ಮಾ" ಅನ್ನುವ ಎಳೆಯ ದನಿನನ್ನ ನಿದ್ರೆಯ ಮಬ್ಬನ್ನೂ ಪೂರ್ಣವಾಗಿ ಓಡಿಸಿತು..
ಮಗಳ ಮುಖ ಕಣ್ಮುಂದೆ ಬಂತು..  `` ಅಮ್ಮಾ , ನನ್ ಮೇಲೆ ನಿಂಗೆ ಸಿಕ್ಕಾಪಟ್ಟೆ ಕೋಪ ಬಂದಿದೆ..  ಹೇಳ್ದೆ ಕೇಳ್ದೆ ಯಾವನ ಹಿಂದೇನೋ ಓಡಿ ಹೋದ್ಲು ಅಂತ.. ಆದ್ರೆ ಅಮ್ಮಾ ನನ್ ಮಾತು ಸ್ವಲ್ಪ ಕೇಳು.. ಪ್ಲೀಸ್.. ''
 `ಪುಟ್ಟೀ.. '
``ಅಮ್ಮಾ ನಾನು ಹೇಳ್ತೀನಿ ಇವತ್ತು.. ನೀನು ಯಾವಾಗ್ಲೂ ಹೇಳ್ತಾನೇ ಇರ್ತಿ.. ನನ್ನೆಲ್ಲಾ ಪ್ರಾಬ್ಲಮ್ಗೂ ನಿನ್ ಹತ್ರ ಸಲ್ಯೂಶನ್ ಇದೆ ಅನ್ನೋ ಥರ..ನಂಗೆ ನನ್ ಮಾತನ್ನು ಕೇಳಿಸಿಕೊಳ್ಳೋಕೆ ಯಾರಾದ್ರು ಬೇಕಿತ್ತು.. ಅಮ್ಮಾ, ಪ್ಲೀಜ್ ಫೋನ್ ಇಡ್ಬೇಡ..  ನಂಗೆ ಬೇರೆ ದಾರಿ ಇರ್ಲಿಲ್ಲಾಮ್ಮ. ನೀನು ಲವ್ ಅನ್ನೋ ಪದದ ಬಗ್ಗೆ ಉರಿದ್ ಬೀಳಿದ್ದೀ,, ನಾನೇನು ಬೇಕಂತ ಲವ್ ಮಾಡ್ಲಿಲ್ಲ .. ಅದೇ ಹೆಂಗೋ ಆಯ್ತು..
ಕುತೂಹಲಕ್ಕೆ ಏನೋ ಮಾಡಕ್ಕೆ  ಹೋಗಿ ಇನ್ನೇನೋ ಆಯ್ತು.. ಅಮ್ಮಾ, ಕೇಳ್ತಿದೀಯಾ?
 ``ಹೂ ಹೇಳು ಕಂದಾ''
ಇವರಿಗೆ ಎಚ್ರ ಆಯ್ತು.. ಪ್ರಶ್ನಾರ್ಥಕವಾಗಿ ನೋಡಿದರು.. ನಾನು ಕಣ್ಣೀ.
ರನ್ನು ಒರೆಸುತ್ತಾ ಸುಮ್ಮನಿರುವಂತೆ ಸೂಚಿಸಿದೆ.. ತಕ್ಷಣ ಇವರು ಲಿವಿಂಗ್ ರೂಮ್ನಿಂದ ಇನ್ನೊಂದು ಹ್ಯಾಂಡ್ ಸೆಟ್ ತಂದು ಆಲಿಸುತ್ತಾ ನನ್ ಪಕ್ಕ ಕುಳಿತರು..
  ``ನಿಂಗೆ ಹೇಳಕ್ಕೆ ಧೈರ್ಯ ಬರ್ಲಿಲ್ಲ.. ನಾವಿಬ್ರು ಚರ್ಚಲ್ಲಿ ಮದ್ವೆ ಆದ್ವಿ.. ಅಮ್ಮಾ  ಈಗ ನನ್ ಹೊಟ್ಟೆಲಿ ಪುಟ್ಟ ಮಗು ಇದೆ.. ಈಗ ನಿನ್ನ ತುಂಬಾ ಮಿಸ್ ಮಾಡ್ಕೋತಿದೀನಿ.. ನಿನ್ನ  ಈಗ್ಲೇ ನೋಡಬೇಕನ್ನಿಸ್ತಿದೆ..
ಗಂಟಲುಬ್ಬು ಬಂದಿತ್ತು.. ಕಷ್ಟ ಪಟ್ಟು ಹೇಳಿದೆ.. ``ಹೂಂ..'' ನನ್ನವರ ಕೈಯ್ಯನ್ನು ಭದ್ರವಾಗಿ ಹಿಡಿದುಕೊಂಡೆ...
 ``ನಾ ಸುಮಾರಾಗಿ ಡ್ರೈವ್ ಮಾಡ್ತೀನಿ.. ನಾನೊಬ್ಳೇ ಬರ್ಲಾ.. ಅಮ್ಮಾ ಕೆವಿನ್ ತುಂಬಾ ಒಳ್ಳೆಯವನು.. ಅವನ್ನ ಕರ್ಕೊಂಡ್ ಬರಕ್ಕೆ ಭಯ ಆಗುತ್ತೆ.. ನೀನು ಅವನನ್ನು ಬೈದರೆ ಅಂತ.. ಅದಕ್ಕೆ ನಾನೊಬ್ಳೇ ಬರ್ತೀನಿ.. ಆಯ್ತ? ಬರಲಾ
 ``ಬೇಡ.... ಬೇಡ... ಕಂದಾ ......ನೀನು ಈಗ ಡ್ರೈವ್ ಮಾಡ್ಬೇಡ.. ಕೆವಿನ್ ಜೊತೇನೇ ಬಾ.. ನಾನವನ್ನ್ ಏನೂ ಬೈಯ್ಯಲ್ಲ ..  ಪ್ರಾಮಿಸ್... ಪ್ಲೀಜ್ ಅಮ್ಮಂಗೋಸ್ಕರ ಇದೊಂದ್ ಹೆಲ್ಪ್ ಮಾಡು ಪುಟ್ಟೀ..ಪ್ಲೀಜ್...'' ದೈನ್ಯವಾಗಿ ಅಳ್ತಾ ಕೇಳಿದೆ...
``ಓಹ್! ಥ್ಯಾಂಕ್ ಯು...  ಲವ್ ಯು ಅಮ್ಮಾ.. ಈವಾಗ್ಲೇ ಹೊರಡ್ತೀನಿ.. ಬೈ.. .. '' ಫೋನ್ ಇಟ್ಟ ಸದ್ದು..
 ನನ್ನ ಕೆನ್ನೆ ಕಣ್ಣೀರಿಂದ ಒದ್ದೆ ಆಗಿತ್ತು.. ಇವರನ್ನು ನೋಡಿದೆ.. ಅವರ ಕಣ್ಣಲ್ಲೂ ನೀರು..  ಅವರೆದೆಯಲ್ಲಿ ಮುಖ ಹುದುಗಿಸಿದೆ. ಅವರು ನನ ಕೂದಲು ಸವರ್ತಾ ಕೇಳಿದ್ರು...` ``ನೀನ್ಯಾಕೆ ಅವಳಿಗೆ ರಾಂಗ್ ನಂಬರ್ ಅಂತ ಹೇಳಲಿಲ್ಲ...?''
 ``ಅದು ಅಂಥ ರಾಂಗ್ ನಂಬರ್ ಆಗಿರ್ಲಿಲ್ಲ..... '' ಅಂತ ಹೇಳಿ ಎದ್ದು ಮಗಳ ರೂಂ ಗೆ ಹೋದೆ. ಇವರು ಹಿಂಬಾಲಿಸಿದರು .. ಮಗಳು ಹಸುಗೂಸಿನ ಹಾಗೆ ನಿದ್ರಿಸಿದ್ದನ್ನು ನೋಡಿ ಪ್ರೀತಿ ಉಕ್ಕಿಬಂತು.. ಅವಳ ಹಣೆಗೆ ಹಗುರಾಗಿ ಮುತ್ತಿಟ್ಟೆ.. ಅವಳು  ಕಣ್ತೆರೆದು ನಿದ್ದೆ ಮಬ್ಬಲ್ಲಿ ಕೇಳಿದ್ಲು`` ಅಮ್ಮಾ, ಅಪ್ಪಾ ಏಂಮಾಡ್ತಿದ್ದೀರಿ.....?''
 `ಪ್ರಾಕ್ಟೀಸ್.... ' ನಾನಂದೆ. 
``ಏಂ ಪ್ರಾಕ್ಟೀಸ್...?' ನಿದ್ದೆಗೆ ಜಾರ್ತ ಕೇಳಿದ್ಲು..


 ``ಕೇಳಿಸಿಕೊಳ್ಳೋ ಪ್ರಾಕ್ಟೀಸ್..... '' ಮೆಲ್ಲಗೆ ಉತ್ತರಿಸಿದೆ..

ಬ್ಯಾಂಡ್ ಏಡ್

ಕೆಲವು ನೆನಪುಗಳೆ ಹಾಗೆ.. ಎಷ್ಟೇ ಕಾಲವಾದರೂ ಮನದಲ್ಲಿ ಅಚ್ಚಳಿಯದೇ ನಿಂತು ಬಿಡುತ್ತವೆ!
    ನಾನು ನನ್ನ ತಂದೆಯನ್ನು ಕಳೆದುಕೊಂಡಾಗಿನ ಸಂದರ್ಭ... ಅವರೊಬ್ಬ ಅದ್ಭುತ ವ್ಯಕ್ತಿ.. ಅವರ ಮರಣ ನನಗೆ ಸಹಿಸಲಾರದ ನೋವು ಕೊಟ್ಟಿತ್ತು. ಯಾರೇ ಎಷ್ಟೇ ಸಮಾಧಾನ ಹೇಳಿದರೂ, ನನ್ನ ಮನಸ್ಸನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರದಷ್ಟು ದು:ಖದಲ್ಲಿ ಮುಳುಗಿದ್ದೆ....ನನ್ನ ಮಗಳಿಗೆ ಒಂದು ವರ್ಷವಾಗಿತ್ತು. . ನಮ್ಮ ಪಕ್ಕದ ಮನೆಯಲ್ಲಿ ಸುಮಾರು ಎರಡು- ಮೂರು ವರ್ಷದ  ಹುಡುಗಿ ಇದ್ದಳು.
ಅವಳಿಗೆ ಬೇಸರವಾದಾಗಲೆಲ್ಲ ನನ್ನ ಮಗಳೊಂದಿಗೆ ಆಡಲಿಕ್ಕೆ ಬರುತ್ತಿದ್ದಳು.. ಆಗ ನನ್ನನ್ನು ಕಥೆ  ಹೇಳುವಂತೆ ಕೇಳುತ್ತಿದ್ದಳು.. ಮಕ್ಕಳಿಗೆ  ಕಥೆ ಹೇಳುವುದು ನನ್ನ ಮೆಚ್ಚಿನ ಹವ್ಯಾಸಗಳಲ್ಲಿ ಒಂದು. ನಾನು ದಿನಾ ಒಂದು ಹೊಸ ಕಥೆಯೊಂದಿಗೆ ಅವಳಿಗಾಗಿ ಕಾಯ್ತಿರ್ತಿದ್ದೆ.
 ಅವತ್ತು ಅದೇ ರೀತಿ ಅವಳು ಬಂದು, `ಆಂಟಿ, ಕಥೆ ಹೇಳಿ ...' ಅಂದಾಗ ಅವಳನ್ನು ಒಳಗೆ ಕರೆದು ಕಥೆ ಹೇಳಲಿಕ್ಕೆ ಪ್ರಯತ್ನಿಸಿದೆ..  ನನ್ನ ತಂದೆಯ ಅಗಲಿಕೆಯ ನೋವು ನನ್ನ ಮಿದುಳನ್ನು ಎಷ್ಟೊಂದು ನಿಷ್ಕ್ರಿಯಗೊಳಿಸಿತ್ತೆಂದರೆ ನನಗೆ ಯಾವ ಕಥಯೂ ನೆನಪಿಗೆ ಬರಲಿಲ್ಲ!!
ಹೊಸ ಕಥೆಗಾಗಿ ಕಾಯುತ್ತಿದ್ದ ಮಗುವಿಗೆ, ``ಸಾರಿ ಚಿನ್ನು.. ನಾನು ತುಂಬಾ ನೋವಿನಲ್ಲಿದೀನಿ.. ಯಾವ ಕಥೆನೂ ನೆನ್ಪಾಗ್ತಿಲ್ಲ.. ನಾಳೆ ಬರ್ತೀಯಾ? ...'' ಅಂದೆ.
 ಅವಳಿಗೆಷ್ಟು ಅರ್ಥವಾಯ್ತೋ ತಿಳೀದು .. ನನ್ ಮುಖ ನೋಡಿ, ` ಹೂಂ.. " ಅಂತ ಹೊರಟಳು.. ನಾನು ಮತ್ತೇ ಅದೇ ನೀರವ ಮೌನ ತುಂಬಿದ ಮನೆ ಮನದೊಂದಿಗೆ ಕುಳಿತೆ .. ಮಲಗಿದ್ದ ಮಗಳ ಹತ್ತಿರ..
ಮೆತ್ತೆ ಬಾಗಿಲು ಬಡಿದ ಸದ್ದು... ಬೇಸರದಿಂದಲೇ ಎದ್ದು ನೋಡಿದೆ..
 ಅದೇ ಪುಟ್ಟ ಹುಡುಗಿ ಬಾಗಿಲಲ್ಲಿ!
 ಬಾಗಿಲು ತೆರೆದು ನಾನು ಮಾತಾಡ ಬೇಕೆನ್ನುವಷ್ಟರಲ್ಲಿ ಅವಳೇ , ` ಆಂಟಿ, ಇದು ತಗೊಳ್ಳಿ.. ನಿಮ್ಗೆ ಎಲ್ಲಿ ನೋವಾಗಿದೆ ಅಲ್ಲಿ ಹಾಕಿಕೊಂಡ್ರೆ ಬೇಗ ವಾಸಿ ಆಗುತ್ತೆ.. '' ಅಂತ ನನ್ ಕೈಗೆ ಒಂದು   Band aid ಕೊಟ್ಟಳು..  ಅವಳ ಮುಖದಲ್ಲಿ ನಾನೇನೋ ಒಳ್ಳೆಯ ಕೆಲಸ ಮಾಡ್ತಿದೀನಿ ಅನ್ನೋ ಖುಷಿ, , ಹೆಮ್ಮೆ, ಕಣ್ಣುಗಳಲ್ಲಿ ಮುಗ್ಧ ಪ್ರೀತಿ, ಕರುಣೆ...  
ನನ್ನ ಆತ್ಮೀಯರು, ಹಿತೈಶಿಗಳು  ಅದೆಷ್ಟೇ ವಿಧವಾಗಿ ಸಮಾಧಾನ ಮಾಡಿದರೂ ಒಂದು ನೆಲೆಗೆ ಬಾರದ ನನ್ನ ಮನಸ್ಸಿಗೆ  ಅಂದು ಮಾತಿಗೆ ನಿಲುಕದಷ್ಟು ಹಿತವಾದ ಅನುಭವ ಆಗಿದ್ದು..  ನಾನು ಶೋಕ ಕೂಪದಿಂದ ಹೊರಬಂದದ್ದು....ಇವತ್ತಿಗೂ ನೆನಪಾಗ್ತನೇ ಇರುತ್ತೆ


ಶ್ರೀನಿವಾಸ ಕಲ್ಯಾಣ

ಆಗಾಗ ನೆಂಟರಿಷ್ಟರು, ಸ್ನೇಹಿತಗು ಅವರ ಮನೆಗಳಲ್ಲಿ ಶುಭ ಕಾರ್ಯಗಳಾದ ನಂತರ ದೇವಾಲಯಗಳಲ್ಲಿ ಶ್ರೀನಿವಾಸ ಕಲ್ಯಾಣ  ಮಾಡಿಸುತ್ತಾರೆ.. ಆಗ ನಮಗೂ ಆಹ್ವಾನ ಬರುತ್ತದೆ.. ಆಗೆಲ್ಲ ನನ್ನ ಮಗಳು `` ಯಾಕಮ್ಮ ಶ್ರೀನಿವಾಸ ಕಲ್ಯಾಣ ಮಾಡ್ತಾರೆ? ಅದು ದೇವರಿಗೆ ಇಷ್ಟನ? ಹಾಗಂತ ಅವನು ಹೇಳಿದಾನ? ಯಾವಾಗ ? 
 ಪದೇ ಪದೇ ಮದುವೆ ಮಾಡಿಕೊಳ್ಳಕ್ಕೆ ಬೋರಾಗಲ್ವ?...  '' ಹೀಗೆ ನೂರೆಂಟು ಪ್ರಶ್ನೆ ಕೇಳ್ತಾಳೆ..
 ಇದ್ಯಾವುದಕ್ಕೂ ಅವಳಿಗೆ ಸಮಾಧಾನವಾಗುವಂಥ ಉತ್ತರ ನಂಗೆ ಸಿಕ್ಕಿಲ್ಲ..
ಅಲ್ಲದೆ  ಶ್ರೀನಿವಾಸ ಪದ್ಮಾವತಿಯನ್ನು ಮದುವೆಯಾಗಿ  ಸುಖ ಸಂಸಾರ ಮಾಡುವ ಮೊದಲೇ ಕಲ್ಲಾದನಲ್ಲ? ಅವನ ಮದುವೆಯನ್ನು ಮತ್ತೆ ಮತ್ತೆ ಮಾಡಿದರೆ ಅವನಿಗೆ ನೋವಾಗುತ್ತೇನೋ ಅನ್ನಿಸುತ್ತೆ.. ಅಲ್ಲವೇ?


ಗುರಿ

 ಅತ್ತಿತ್ತ ನೋಡುತ್ತ ಅಲ್ಲಲ್ಲೆ ನಿಲ್ಲುತ್ತ 
ಮೆಲ್ಲ ನಡೆಯುವ ತನ್ನ ಗೆಳತಿಗಾಗ
ತನ್ನ ಜೊತೆ ಜೊತೆಯಲ್ಲಿ ಹೆಜ್ಜೆ ಹಾಕದ ಅವಳ
ಹುಡುಗಾಟ ನೋಡಿ ಕಿಡಿ ನುಡಿದ ಹುಡುಗ
``ಬೇಗ ಹೆಜ್ಜೆಯ ಹಾಕು ದೂರವಿದೆ ನಮ್ಮ ಗುರಿ
ಸಾಗಬೇಕಿದೆ ಕೊಂಚ ನಿಲುಗಡೆಯು ಇರದೆ
ಅತ್ತಿತ್ತ ನೋಡುತ್ತ ಹೊತ್ತೇಕೆ ಕಳೆಯುತಿಹೆ
ಕಡಿವಾಣ ನಿನಗೀಗ ಬೇಕಾಗಿದೆ''
ಮೆಲು ನಗೆಯ ಬೀರುತ್ತ. ಮರಿ ದುಂಬಿ ಹಿಡಿಯುತ್ತ
ಪ್ರೀತಿಯಿಂದಲಿ ಅವನ ಮುಖವ ನೋಡಿ 
ಕಣ್ತುಂಬ ನಲಿವನ್ನು ತುಂಬಿ ಕೊಂಡಿಹ ಅವಳು
ನುಡಿದಳು ಮಾತಿನಲೆ ಹಾಕಿ ಮೋಡಿ

``ಇಲ್ಲಿ ಚಿಟ್ಟೆಯ ನೋಡು ಅಲ್ಲಿ ಅರಳಿದ ಸುಮವು
ಕೋಗಿಲೆಯ ಗಾಯನವು ಸೊಗಸಾಗಿದೆ
ಇಂಥ ಆನಂದವು ಇಲ್ಲಿಯೇ ಇರುವಾಗ 
ಮತ್ತಾವ ಗುರಿ ತಲುಪಬೇಕಾಗಿದೆ?''

ಋಣಾಣುಬಂಧ

 ನನ್ನ ತೀರಾ ಪರಿಚಿತರೊಬ್ಬರು ಆಸ್ಪತ್ರೆಯಲ್ಲಿ ದಾಖಲಾಗಿದ್ರು.. ಅವರನ್ನು ನೋಡಲು  ಬೇಗ ಮನೆಯ ಕೆಲಸಮುಗಿಸಿ ಹೊರಟೆ.. ಇನ್ನೇನು  ಆ ಆಸ್ಪತ್ರೆಯ ಬಾಗಿಲಲ್ಲಿ ಆಟೋದಿಂದ ಇಳೀಬೇಕು, ಆಗ ಆಕೆಯ ತಮ್ಮ ಬಂದು `` ಮ್ಯಾಡಂ, ಇಲ್ಲಿ ಆಗಲ್ಲ ಅಂತ ಬೇರೆ ಹಾಸ್ಪಿಟಲ್ ಗೇ ಕರ್ಕೋಡು ಹೋಗಿದಾರೆ.. ನೀವು ನನ್ ಹಿಂದೇ ಬನ್ನಿ...'' ಅಂತ ಅವರ ಟೂ ವೀಲರ್ ನಲ್ಲಿ ಹೋದರು..ನಾನು ಅದೇ ಆಟೋದಲ್ಲಿ ಹಿಂಬಾಲಿಸಿದೆ.. ಆಟೋದವನಿಗೆ ಹಣ ನೀಡಿ, ನಾ ಆಸ್ಪತ್ರೆಯ ಒಳಗೆ ಪ್ರವೇಶಿಸುವಷ್ಟರಲ್ಲಿ ಆತ ಎಲ್ಲೋ ಮಾಯವಾಗಿದ್ದ!.. ಅವನೆಲ್ಲಿ ಅಂತ ಅರಸುತ್ತಾ  ಇದ್ದ ನನ್ನ ಬಳಿ ನರ್ಸ್ ಒಬ್ಬರು ಬಂದು`` ಸುಮಾ ಅಂದ್ರೆ ನೀವೇನಾ?'' ಅಂದ್ರು ನಾನು ಹೌದೆಂದು ತಲೆ ಆಡಿಸಿದೆ.. ೨೩ನೇ ನಂಬರ್ ಬೇಡ್ ನವರನ್ನು ತಾನೇ ನೀವು ನೋಡ್ಬೇಕು? ಬನ್ನಿ ಬೇಗ ಅವರ ಕಂಡೀಶನ್ ತುಂಬಾ ಕ್ರಿಟಿಕಲ್ ಆಗಿದೆ.. ಬೇಗ ಬನ್ನಿ ನಿಮ್ಮನ್ನೇ ಕಾಯ್ತಿದೀವಿ'' ಅಂದಾಗ ನನಗೆ ಶಾಕ್!! ಕಾಲುಗಳಲ್ಲಿ ನಡೆಯುವ ಶಕ್ತಿಯೇ ಕಳೆದು ಹೋದ ಭಾವ!
 ಆಕೆ ಹೆಚ್ಚೂ ಕಡಿಮೆ ನನ್ನನ್ನು ಎಳೆದುಕೊಂಡು ಹೋಗಿ ಆ ೨೩ನೇ ಬೆಡ್ ಮುಂದೆ ನಿಲ್ಲಿಸಿದಳು.. ಅಲ್ಲಿ ಮಲಗಿದ್ದ ಕ್ಷೀಣ ಕಾಯದ ವ್ಯಕ್ತಿಗೆ`` ತಾತ ನಿಮ್ ಮಗಳು ಬಂದಿದಾರ್‍ ''  ನೋಡಿ.. '' ಅಂದು ನನ್ ಕೈಯ್ಯನ್ನು ಆತನ ಕೈಯ್ಯಲ್ಲಿಟ್ಟಳು.. ನನಗೆ ಎಷ್ಟು ದಿಗ್ಭಮೆಯಾಗಿತ್ತು, ಎಂಥ ಅಯೋಮಯ  ಸ್ಥಿತಿಯಲ್ಲಿದ್ದೆ ಎಂದರೆ ನಾ ಏನೊಂದೂ ಹೇಳದಾದೆ.. ಸುಮ್ಮನೇ ಅವರ ಪಕ್ಕ ಕುಳಿತೆ
 ಆತ ನನ್ನ ಕೈಯನ್ನು ತನ್ನ ಕೃಶವಾದ ಕೈಯ್ಯಲ್ಲಿ ಹಿಡಿದು ಅಸ್ಪಷ್ಟವಾಗಿ ಏನೋ ಹೇಳುತ್ತಿದ್ದರೆ  ನನಗೆ ನನ್ನ ತಂದೆಯ ನೆನಪು ಒತ್ತರಿಸಿ ಬರುತ್ತಿತ್ತು.. ಅವರ ಮಾತಿಗೆಲ್ಲಾ ತಲೆ ಆಡಿಸುತ್ತಾ .  ಕೆಲವು ಪ್ರಶ್ನೆಗಳಿಗೆ  ನನಗೆ ತಿಳಿದ ರೀತಿ ಉತ್ತರಿಸುತ್ತಾ, ಇಲ್ಲಿಗೆ ನಾನು ಬಂದ ಎಂಬುದನ್ನೇ ಮರೆತು ಪಕ್ಕದಲ್ಲೇ ಕುಳಿತುಬಿಟ್ಟೆ..
 ಸ್ವಲ್ಪ ಸಮಯದ ನಂತರ ಆತನಿಗೆ ಬಿಕ್ಕಳಿಕೆ ಬಂತು.. ನಾನು ನನ್ನ ಬ್ಯಾಗಲ್ಲಿದ್ದ ಬಾಟಲ್ ನಿಂದ ನೀರು ಕುಡಿಸಿದೆ. ಎರಡು ಗುಟುಕು .. ಮೂರನೇ ಗುಟುಕು ಒಳಗೆ ಹೋಗಲಿಲ್ಲ.. ಆತನ ಕಣ್ಣುಗಳಲ್ಲಿ ಇದ್ದ ಕಾಂತಿ ಮಾಯವಾದಂತೆ ಅನ್ನಿಸಿತು!  ತಕ್ಷಣ ಗಾಭರಿಯಿಂದ ಅಲ್ಲೇ ಇದ್ದ ಡಾಕ್ಟರ್ ನ ಕರೆದೆ.. ಅವರು ಬಂದು.. ಚೆಕ್ ಮಾಡಿ ` ಸಾರಿ ಮ್ಯಾ ಡಂ.. ಹಿ ಈಸ್ ನೋ ಮೋರ್ '' ಅಂದರು.  ನಾನು ``ಇವರು ಯಾರಂತ ನಂಗೊತ್ತಿಲ್ಲ ಸರ್....'' ಅಂದೆ.. ``ಮತ್ತೆ ಇಷ್ಟು ಹೊತ್ತು ಅವರ ಜೊತೆ ಮಾತಾಡ್ತಿದ್ರಿ?'' ಅಂದ್ರು.
ಅಷ್ಟು ಹೊತ್ತಿಗೆ ನನ್ನ ಕರೆತಂದಿದ್ದ ನರ್ಸ್ ಬಂದು.. ``ಸಾರಿ ಮ್ಯಾಡಂ  ಈ ಪೇಷಂಟ್ ಕಡೆಯೋರು ಇವರು.. ನಾನು ಕನ್ಫ್ಯೂಸ್ ಮಾಡಿಕೊಂಡೆ....'' ಅಂದ್ರು.
ಆಗ ಅಲ್ಲಿ ಬಂದ ನನ್ನ ಪರಿಚಿತರ ತಮ್ಮ  ಬಂದ... ``ಓ ಇಲ್ಲಿದೀರಾ?  ನಮ್ಮಕ್ಕ  ಇರೋದು ಬೇರೆ ಕಡೆ ಬನ್ನಿ...'' ಅಂತ ಕರೆದ.. ನನಗೆ  ಮನಸ್ಸು ತಳಮಳಗೊಂಡಿದ್ದರಿಂದ  ಅವರಿಗೆ ಮತ್ತೆ ಬರ್ತೀನಿ.. ಕೆಲಸವಿದೆ ಅಂತ ಹೇಳಿ, ಸ್ವಲ್ಪ ಹಣ ಕೊಟ್ಟು, ಅಲ್ಲಿ ಹೆಚ್ಚು ಸಮಯ ನಿಲ್ಲದೇ ಮನೆಗೆ ಹಿಂತಿರುಗಿದೆ..
 ಸ್ವಲ್ಪಕಾಲ  ಧ್ಯಾನ ಮಾಡಿದ ನಂತರ ಮನಸ್ಸು ತಿಳಿಯಾಯ್ತು....

ದಶಕಗಳ ದಿನಚರಿಯಲಿ...ಒಂದು ಪ್ರೇಮ ಕಥೆ



 ನವೆಂಬರ್ ೧೯೫೪
 ಗೆಳತೀ,
 ಅಬ್ಬಾ! ಮುಗಿಯಿತು ಯುದ್ಧ ದೇವರಿಗೆ ನಮನ
 ಓಡೋಡಿ ಬರುವೆ ನಾ ಕಾಣಲಿಕೆ ನಿನ್ನ

ಬಾಲ್ಯದೊಡನಾಟದಲಿ ಸದ್ದಿಲ್ಲದಂತೆ
  ನಮ್ಮ ಒಲವಿನ ಬಳ್ಳಿ ಹೇಗೆ ಚಿಗುರಿತ್ತೆ?

ನೆನಪಿದೆಯ ನೀನಂದು ನೀಡಿದ್ದ ವಚನ?
 ಅದರಂತೆ ನನ್ನನ್ನು ವರಿಸುವೆಯ ಚಿನ್ನ?

ನವೆಂಬರ್ ೧೯೬೪
ಗೆಳತೀ,
 ಹತ್ತು ವರ್ಷದ ಹಿಂದೆ ನಾಚಿ `ಹೂಂ' ಅಂದಿ
  ಮುಂದೆ ಬರೀ ಆನಂದ ನೀನಾದೆ ಮಡದಿ
 ನಿನ್ನೆ ಮೊನ್ನೆಯ ಹಾಗೆ ದಶಕ ಕಳೆದಾಯ್ತು
 ನಮ್ಮ ಮಗನಿಗೆ ಈಗ ವರುಷ ಒಂಬತ್ತು


  ನವೆಂಬರ್ ೧೯೭೪
ಗೆಳತೀ,
 ಹತ್ತು ವರುಷವು ಮತ್ತೆ ಕಳೆದದ್ದು ಹೇಗೆ?!
 ನಮ್ಮೊಲವು ನಳನಳಿಸುತಿದೆ ಇನ್ನು  ಹಾಗೇ
ನನ್ನಬದುಕಲಿ ನೀನೇ ಮತ್ತೇನೂ ಇಲ್ಲ.
ಒಲವಿನಲಿ ಚೆಲುವಿನಲಿ ಕುಂದೆಣಿತೂ ಇಲ್ಲ
ನವೆಂಬರ್ ೧೯೮೪
ಗೆಳತೀ,
ಏಳಲ್ಲಿ ಬೀಳಲ್ಲಿ ಜೊತೆಯಲ್ಲೆ ಇರುವೆ
 ಬಾಳ ಗಾಡಿಯ ನೊಗವ ಜೊತೆಗೆ ಹೊತ್ತಿರುವೆ
 ಮೂವತ್ತು ವರ್ಷಗಳ ಬಾಳ ಸಂಗಾತಿ.
 ನೀನಾಗು ಪ್ರತಿ ಜನ್ಮದಲೂ ನನ್ನ ಗೆಳತಿ
ನವೆಂಬರ್ ೧೯೯೪
ಗೆಳತೀ,
ನಲವತ್ತು ವರ್ಷಗಳು ತುಂಬಿದವು ಇಂದು
 ನಾನಂಬಲಾರೆ ನೀ ಬಳಿ ಇಲ್ಲವೆಂದು
 ದೇಹ ಮಣ್ಣಾದರೂ ನಿನ್ನಾತ್ಮ ನನ್ನ
ಹೃದಯದಲಿ ಅಡಗಿಯೇ ಇರುತಿಹುದು ಚಿನ್ನ

ನವೆಂಬರ್ ೨೦೦೮
 ಪ್ರಿಯ ಓದುಗ
  ಮಡಿಚಿಟ್ಟ ಅಮ್ಮನ ಸೀರೆಗಳ ನಡುವೆ
 ಈ ಎಲ್ಲ ಕವನಗಳೆ ಅಮ್ಮನಿಗೆ ಒಡವೆ
 ಕೊನೆಯ ಕಣ್ನೀರಿನಲಿ ನೆನದದ್ದು  ಹೊರತು
ಅದು ನನ್ನ ತಾಯ್ತಂದೆ ಪ್ರೇಮದಾ ಗುರುತು

ಈಗ ಇಬ್ಬರು ಇಲ್ಲ ಪ್ರೀತಿಯೋ ಅಮರ

ಸ್ವರ್ಗದಲಿ ಜೊತೆಯಲ್ಲಿ  ಸೇರಿಸಲಿ ಅವರ