ಬುಧವಾರ, ನವೆಂಬರ್ 16, 2016

ಅಸಹಾಯಕತೆ


ಅಸಹಾಯಕತೆ ಎಂಬುದು ಎಷ್ಟೊಂದು ನೋವು ಕೊಡುತ್ತದೆ ಅನ್ನೋದು ನನಗೆ ಕೆಲಸಮಯದ ಹಿಂದೆ ಆದ ಅನುಭವದಿಂದ ಗೊತ್ತಾಯ್ತು. ಎರಡನೇ ಬಾರಿ ಹಾಕ್ತಿದೀನಿ

ನಾನು ಶಾಲೆ ಮುಗಿಸಿಕೊಂಡು ಬರುವಾಗ ಸ್ವಲ್ಪ ಅಗತ್ಯ ವಸ್ತುಗಳನ್ನು ಖರೀದಿ ಮಾಡಬೇಕಾದ್ದರಿಂದ ಅರ್ಧ ದಾರಿಲಿ ಆಟೋದಿಂದ ಇಳಿದು ನನ್ನ ಕೆಲಸ ಮುಗಿಸಿಕೊಂಡು ಮನೆಗೆ ಹೊರಟೆ. ಮುಖ್ಯ ರಸ್ತೆಯ ವಾಹನ ದಟ್ಟಣೆ ಮತ್ತು ಪಲ್ಯೂಶನ್ ಗಳಿಂದ ಬಚಾವಾಗಲು ಒಳ ಹಾದಿಯಲ್ಲಿ ಹೋಗುವುದೆಂದು ತೀರ್ಮಾನಿಸಿ ಹೊರಟೆ. 

ಒಂದು ಸ್ವಲ್ಪದೂರ ಸಾಗುವಷ್ಟರಲ್ಲಿ ಮಗುವೊಂದರ ಆಕ್ರಂದ, ಹಿರಿಯರೊಬ್ಬರ ಕಿರುಚಾಟ ಕೇಳಿತು. ಮುಂದೆ ಹೋಗಿ ನೋಡಿದಾಗ ತಂದೆಯೊಬ್ಬರು ಮಗುವನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರು. ಮಗು `` ಸ್ಕೂಲ್.... ಸ್ಕೂಲ್ ....''ಅಂತ ಆಳುತ್ತಾ ದೈನ್ಯವಾಗಿ ನನ್ನನ್ನು ನೋಡಿತು.

ಅದೇ ಮಗುವನ್ನು ಈಗ್ಗೆ ಎಂಟು -ಹತ್ತು ದಿನಗಳ ಹಿಂದೆ ಇದೇ ದಾರಿಯಲ್ಲಿ ಬಂದಾಗ ನಾನು ನೋಡಿದ್ದೆ. ಹರುಕು, ಹಳೆ ಬಟ್ಟೆ ತೊಟ್ಟಿದ್ದರೂ ಅದರ ಕಣ್ಣುಗಳಲ್ಲಿದ್ದ ಮಿಂಚು ನನ್ನನ್ನು ಸೆಳೆದಿತ್ತು. ಅವಳನ್ನು ಹತ್ತಿರ ಕರೆದು, ನನ್ನ ಬ್ಯಾಗಿನಲ್ಲಿದ್ದ ಚಾಕ್ಲೇಟನ್ನು ಅವಳ ಕೈಗಿತ್ತು `` ಯಾವ ಸ್ಕೂಲಿಗೆ ಹೋಗ್ತೀಯಾ ಪುಟ್ಟಿ? ನಿನ್ನ ಹೆಸರೇನು.....? ಅಂತ ಕೇಳಿದ್ದೆ..................

ಮಗು `` ಸ್ಕೂಲಿಗೆ ಹೋಗಲ್ಲಾ ಆಂಟಿ. ಮನೆ ಕೆಲ್ಸ ಮಾಡ್ತೀನಿ....'' ಅಂದಾಗ ನಾನು `` ನೀನು ಸ್ಕೂಲಿಗೆ ಹೋಗ್ಬೇಕಮ್ಮಾ.ನಿಮ್ಮ ಅಪ್ಪ ಅಮ್ಮಂಗೆ ಕೇಳು ಸ್ಕೂಲಿಗೆ ಸೇರ್ಸಿ ಅಂತ. ಹಟ ಮಾಡಿ ಆದ್ರೂ ಸ್ಕೂಲಿಗೆ ಸೇರ್ಬೇಕು. ಆಯ್ತಾ.....ನಿಂಗೆ ಪುಸ್ತಕ ಪೆನ್ಸಿಲ್ಲು ಎಲ್ಲಾ ನಾನು ಕೊಡಿಸ್ತೀನಿ.....?ಅಂತ ಅವಳ ತಲೆ ಸವರಿ ಏನೋ ದೊಡ್ದ ಕೆಲಸ ಮಾಡಿದ ತೃಪ್ತಿಯಿಂದ ಮನೆ ಸೇರಿದ್ದೆ.

ನನ್ನನ್ನು ನೋಡಿ ಮಗುವಿನ ಅಳು ಇನ್ನೂ ಹೆಚ್ಚಾಯ್ತು. ಅವಳನ್ನು ಬಡಿಯುತ್ತಿದ್ದ ಅವಳ ತಂದೆ ನನ್ನನ್ನು ನೋಡಿದರು. ಅಬ್ಬಾ! ಕೆಂಪು ಕಣ್ಣುಗಳ ಕ್ರೂರ ನೋಟಕ್ಕೆ ನಾನು ನಡುಗಿ ಹೋದೆ! ಆತ ಬಹುಶ: ಕುಡಿದಿದ್ದಿರಬಹುದು. ಅವರಿಗೆ ``ಮಗು ಸ್ಕೂಲ್ಗೆ ಸೇರಿಸಿ ಅಂತ ಹಟ ಮಾಡುವಂತೆ ಕುಮ್ಮಕ್ಕು ಕೊಟ್ಟಿದ್ದು ಇವಳೇ.....'' ಅಂತ ಗೊತ್ತಾಯಿತೇನೋ. ನನ್ನನ್ನು ದುರುಗುಟ್ಟಿಸಿಕೊಂಡು ನೋಡುತ್ತಾ ಮಗುವಿನ ಕೆನ್ನೆಗೆ ಛಟಾರನೆ ಹೊಡೆದು, ತಿರಸ್ಕಾರ ಕೋಪಗಳಿಂದ ನನ್ನತ್ತ ನೋಡಿ, ನನಗೆ ಹೋಗುವಂತೆ ಸನ್ನೆ ಮಾಡಿದರು. ಆತ ನನಗೇ ಹೊಡೆದಂತೆ ಭಾಸವಾಗಿ ಅಲ್ಲಿಂದ ಹೊರಟೆ. ಭಯ ಉದ್ವೇಗಗಳಿಂದ ನನ್ನ ಎದೆ ಬಡಿತ ನನಗೇ ಕೇಳುವಂತೆ ಅನ್ನಿಸಿತು.

ದಾರಿಯಲ್ಲಿ ಅಳುವುದು ಸರಿ ಅಲ್ಲ ಎಂದು ಕರ್ಚೀಫ್ ನಿಂದ ಬಾಯನ್ನು ಭದ್ರವಾಗಿ ಮುಚ್ಚಿಕೊಂಡು, ಸರಸರ ಮನೆ ಸೇರಿ, ಮನಸ್ಸು ಹಗುರವಾಗುವ ವರೆಗೂ ಬಿಕ್ಕಿ ಬಿಕ್ಕಿ ಅತ್ತೆ.........


3 ಕಾಮೆಂಟ್‌ಗಳು:

  1. 21 ne shathamanakke adiyittu nagareeka samajada mukhyavahiniylali iddaru navestu asahayakaru ebudannu lekhana prathibimbiside. sarkara este yojane savaltthu odagisidaru adesto jana mukhyavahinige baradiruvudu & makkaligu avakasha nirakarisutthiruvudu shochneeya. ee nittinalli lekhana gamanarha

    ಪ್ರತ್ಯುತ್ತರಅಳಿಸಿ
  2. ಜೀವನದಲ್ಲಿ ಹಲವರಿಗೆ ತಕ್ಷಣದ ಅಗತ್ಯದ ಯೋಚನೆ.ಸ್ವಲ್ಪ ದಿನಗಳು ಕಷ್ಟವಾದರೂ ಸರಿ, ಉತ್ತಮ ವಿದ್ಯೆ ಕೊಡಿಸಿದರೆ ಕನಿಷ್ಠ ವಿಶ್ವಾಸದಿಂದಲಾದರೂ ಏನಾದರೂ ದುಡಿಮೆ ಮಾಡಿ ಅನ್ನ ಕಾಣಬಹುದು ಎಂಬ ವಿಚಾರವಿಲ್ಲದ ಪೋಷಕರು.ಇದನ್ನು ಕಂಡೇ ಸರ್ವಜ್ಞ ಹೇಳಿರಬಹುದು ವಿದ್ಯೆ ಕೊಡದಾ ತಂದೆ, ಬುದ್ಧಿ ಕೊಡದಾ ಗುರುವು... ತಿಳಿದರೆ ಒಂದು ಜೀವನ ಪಾಠ.ಬರಹ ಚೆನ್ನಾಗಿದೆ.ಶುಭವಾಗಲಿ.

    ಪ್ರತ್ಯುತ್ತರಅಳಿಸಿ