ಗುರುವಾರ, ನವೆಂಬರ್ 1, 2012

ಸಿರಿಗನ್ನಡಮ್ ಗೆಲ್ಗೆ




ಓ!!! ಬಂದೇ ಬಿಟ್ಟಿತು ನವೆಂಬರ್ ಒ೦ದು......


ಅಮ್ಮಂದಿರ ದಿನ, ಅಪ್ಪಂದಿರ ದಿನ ಇದ್ದ ಹಾಗೆ ಕನ್ನಡಮ್ಮನನ್ನೂ ನೆನಪಿಸಿಕೊಳ್ಳಲು ವರ್ಷದಲ್ಲಿ ಒಂದೇ ಬಾರಿ ಬರುವ ಕನ್ನಡದ ದಿನ.

” ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು......." ಎಂದು ಪರಸ್ಪರ ಹಾರೈಸಿದರೆ, ಕನ್ನಡ ಬೆಳೆಸಿ, ಕನ್ನಡ ಉಳಿಸಿ, ಅಂತ ಘೋಷಣೆಗಳನ್ನು ಕೂಗಿದರೆ ಅದೇ ಕನ್ನಡಾಭಿಮಾನವೇ?

ಅಷ್ಟಕ್ಕೂ ಕನ್ನಡವನ್ನೇಕೆ ಉಳಿಸಬೇಕು? ಉಳಿಸಲು ಕನ್ನಡ ಖಂಡಿತವಾಗಿ ಸಾಯುತ್ತಿಲ್ಲ.ಅದು ಸಾಯುವಂತಿದ್ದರೆ ಅನೇಕಾನೇಕ ವರ್ಷಗಳ ಪರಭಾಷಿಗರ ಧಾಳಿಯ ಪೆಟ್ಟಿಗೆ ಇಷ್ಟು ಹೊತ್ತಿಗೆ ಕನ್ನಡ ಧೂಳೀಪಟವಾಗಬೇಕಿತ್ತು.

 ಆರೋಗ್ಯವಂತನನ್ನು ಪುನಃಪುನಃ ನೀನು ರೋಗಿ ಎಂದು ಹೇಳಿ, ಆತನನ್ನು ನಂಬುವಂತೆ ಮಾಡುತ್ತಾರಂತೆ.  ಅದೇ ರೀತಿ ಚಿರಂತನವಾದ ಕನ್ನಡ ಭಾಷೆಯನ್ನು ಸ್ವತಃ ಕನ್ನಡಿಗರೇ ಉಪೇಕ್ಷೆ ಮಾಡಿ ತಮ್ಮ ಮನಸ್ಸಿನಲ್ಲಿ ಸಾಯಿಸಿಕೊಂಡು ಮತ್ತು ಅದು ಸಾಯುತ್ತಿದೆ ಎಂದು ಬಲವಾಗಿ ನಂಬಿಕೊಂಡು, ಮೇಲೆ "ಅಯ್ಯೋ!.......... ಕನ್ನಡ ಸಾಯುತ್ತಿದೆ, ಕನ್ನಡವನ್ನು ಉಳಿಸಿ.....! ಕಾಪಾಡಿ.......! ಕಾಪಾಡಿ........!" ಎಂದು ಬೊಬ್ಬಿಡುತ್ತಿದ್ದಾರೆ.

ಹಾಸ್ಯ ಕಲಾವಿದರು ಕನ್ನಡದ ದುರವಸ್ಥೆಯನ್ನು ತಮ್ಮ ಹಾಸ್ಯದ ವಸ್ತುವಾಗಿ ಮಾಡಿಕೊಂಡಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ.

ಇನ್ನು ಅತಿ ಪ್ರಬಲ ಮಾಧ್ಯಮವಾದ ದೃಶ್ಯ ಮಾಧ್ಯಮ, ಸಿನೆಮಾ. " ಕನ್ನಡದಲ್ಲಿ ಒಳ್ಳೆ ಸಿನ್ಮಾ ಬರೋಲ್ಲ....."ಅಂತ ಸದಭಿರುಚಿಯುಳ್ಳ ಪ್ರೇಕ್ಷಕರು ಇತರ ಭಾಷೆಯ ಸಿನೆಮಾಗಳನ್ನು ನೋಡುತ್ತಿದ್ದಾರೆ. ಇಲ್ಲವೇ ಸಿನೆಮಾ ನೋಡುವುದನ್ನೇ ಬಿಟ್ಟಿದ್ದಾರೆ.

ಕನ್ನಡದಲ್ಲಿ ಒಳ್ಳೆಯ ಚಲನಚಿತ್ರಗಳೇ  ಬರುತ್ತಿಲ್ಲ ಎಂದಲ್ಲ, ಆದರೆ ಅದಕ್ಕಿರುವ ಪ್ರಚಾರ ಅತಿ ಕಡಿಮೆ. ಜನರು ಯಾರ ಅಭಿಪ್ರಾಯಗಳನ್ನು ನಂಬುತ್ತಾರೋ, ಯಾರ ಅಭಿರುಚಿಗಳನ್ನು ಗೌರವಿಸುತ್ತಾರೋ ಅಂತಹ ಪತ್ರಕರ್ತರು ನಿಜವಾಗಿ ಸದಭಿರುಚಿಯ ಚಿತ್ರಗಳ ಬಗ್ಗೆ ಪ್ರಚಾರ ನೀಡಬೇಕು.  

ನಮ್ಮಲ್ಲಿ ಅತ್ಯುತ್ತಮ ಕಾದಂಬರಿಕಾರರಿದ್ದಾರೆ, ಕಥೆಗಾರರಿದ್ದಾರೆ. ಅತಿ ಶ್ರೇಷ್ಟ ದರ್ಜೆಯ ನಿರ್ಮಾಪಕರು, ನಿರ್ದೇಶಕರು,ಛಾಯಗ್ರಾಹಕರೂ ಇದ್ದಾರೆ.  ( ಕರ್ನಾಟಕದ ಛಾಯಾಗ್ರಾಹಕರು ಅತಿ ಹೆಚ್ಚು ಪ್ರಶಸ್ತಿಗೆ ಭಾಜನರಾಗಿದ್ದಾರೆಂದು ಕೇಳಿದ್ದೇನೆ)

 ಕನ್ನಡದವರೇ ಆದ ಕಲಾವಿದರಿಗೆ ಯಾವ ಕೊರತೆಯೂ ಇಲ್ಲ.ಆದರೂ ಯಾಕೆ ವಿಶ್ವದರ್ಜೆಯ ಚಿತ್ರಗಳು ಬರುತ್ತಿಲ್ಲ ಎಂದರೆ, ಈ ಎಲ್ಲರ ನಡುವೆ ಸರಿಯಾದ ಕೊಂಡಿ ಇಲ್ಲದೇ ಇರುವುದು. ಮಾಧ್ಯಮಗಳು ಈ ಕೆಲಸವನ್ನು ಮಾಡಬೇಕು.

ಕೆಲವರ ಅಭಿಪ್ರಾಯದಂತೆ ಸಿನಿಮಾ ಪ್ರೇಕ್ಷಕರು ಹೆಚ್ಚಿನಂಶ ಗ್ರಾಮೀಣ ಭಾಗದವರು ಮತ್ತು ಕೆಳ ಮಧ್ಯಮ ವರ್ಗದವರು. ಅವರಿಗೆ ಬರೀ ಮಸಾಲೆ. ತುಂಬಿದ.  ಗ್ರಾಮೀಣ ಪರಿಸರಕ್ಕೆ ಹೊಂದುವಂತಹ ಸರಳವಾದ. ಚಿತ್ರಗಳನ್ನೇ ಕೊಡಬೇಕು.  ಕ್ಲಿಷ್ಟವಾದ ಸಾಮಾಜಿಕ ಸ0ದೇಶಗಳು ಅವರಿಗೆ ಅರ್ಥವಾಗುವುದಿಲ್ಲ. ಆದ್ದರಿಂದ ಅವರು ಸ್ವೀಕರಿಸಲಾರರು..... 

ಆದರೆ ನಾವು ಏಕೆ ಅವರ ಅಭಿರುಚಿಯ ಮಟ್ಟವನ್ನು ಹೆಚ್ಚಿಸಬಾರದು ? ಅವರು ತಂಗಳನ್ನಕ್ಕೇ ತೃಪ್ತಿ ಪಡುತ್ತಾರೆಂದು ಅವರಿಗೆ ಹಳಸಿದ್ದನ್ನು ನೀಡಬೇಕೆ? ಏಕೆ ಅವರಿಗೆ ಶುಚಿ ರುಚಿಯಾದ ತಾಜಾ ಆಹಾರ ನೀಡ ಬಾರದು? ಹೇಳುವ ಸದ್ವಿಚಾರವನ್ನೇ ಅವರಿಗೆ ರುಚಿಸುವಂತೆ ಹೇಳುತ್ತಾ ಕ್ರಮೇಣ ಅವರ ಜೀವನಮಟ್ಟವನ್ನೂ ವೈಚಾರಿಕ ಮಟ್ಟವನ್ನೂ ಏಕೆ ಹೆಚ್ಚಿಸಬಾರದು......? 

ಕೊಲೆ ಸುಲಿಗೆ ಮುಂತಾದ ಕೆಟ್ಟ ವಿಷಯಗಳಿನ್ನು ತೋರಿಸಿ ಸಮಾಜ ಘಾತಕರನ್ನು ಸೃಷ್ಠಿಸುವ ಬದಲು ಏಕೆ ಪ್ರಾಮಾಣಿಕತೆ, ಪರಿಶ್ರಮಗಳಿಂದ ತೀರ ಕೆಳಮಟ್ಟದಿಂದ ಸಾಧನೆಯ ಶಿಖರವನ್ನು ಮುಟ್ಟಿದ ಸಾಧಕರ ಕತೆಗಳನ್ನೇಕೆ ತೋರಿಸಬಾರದು......?

ಅವರೇನು ನಮಗೆ ಇಂಥದ್ದೇ ಕೊಡಿ ಎಂದು ಕೇಳುತ್ತಿದ್ದಾರೆಯೇ? ಕೊಟ್ಟಿದ್ದನ್ನು ಸದ್ದಿಲ್ಲದೇ ಸ್ವೀಕರಿಸುತ್ತಿದ್ದಾರೆ. ಅವರಿಗೆ ಒಳ್ಳೆಯದನ್ನೇ ಕೊಟ್ಟು ನೋಡಬಾರದೇಕೆ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ