ಭಾನುವಾರ, ನವೆಂಬರ್ 11, 2012

ಮಕ್ಕಳ ದಿನಾಚರಣೆ


ನವೆಂಬರ್ ನಲ್ಲಿ ಬರುವ ಮತ್ತೊಂದು ಜನಪ್ರಿಯ ಉತ್ಸವ ಎಂದರೆ ಮಕ್ಕಳ ದಿನಾಚರಣೆ.



ಎಷ್ಟೋ ವರ್ಷಗಳಿಂದ ನಾವು ಒಂದೇ ರೀತಿಯಲ್ಲಿ ಈ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ.
ಅದೇ ಭಾಷಣಗಳು, ಅದೇ ಬಹುಮಾನಗಳು,

ನಾವೇಕೆ ಏನಾದರೂ ಹೊಸದನ್ನು ಮಾಡಬಾರದು? ಯಾವುದು ನಿಜವಾದ ರೀತಿಯಲ್ಲಿ. ವರ್ಷವಿಡೀ ಮಕ್ಕಳು ಸ್ಮರಣೆಯಲ್ಲಿಟ್ಟು ಕೊಳ್ಳುವ, ಅಷ್ಟೇ ಅಲ್ಲ ಅವರಿಗೆ ಉಪಯುಕ್ತವಾಗುವಂತದ್ದನ್ನು?ಅವರ ಆಲೋಚನಾ ವಿಧವನ್ನು ತಿದ್ದುವಂತದ್ದು? ಅವರ ಚಿಂತನೆಯ ಮಟ್ಟವನ್ನು  ಸುಧಾರಿಸುವಂತದ್ದು?


ನಾನು ಗಮನಿಸಿದಂತೆ ಇತ್ತೀಚಿಗೆ ಮಕ್ಕಳು ತಮ್ಮ ಬಾಲ್ಯ ಸಹಜವಾದ ಚಟುವಟಿಕೆ, ಹೆಚ್ಚು ಅರಿಯುವ ಕೌತುಕ, ಮತ್ತಷ್ಟು ಅನ್ವೇಷಿಸುವ ಕುತೂಹಲವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಆಲಸೀ ಭಾವ ಬೆಳೆಯುತ್ತಿದೆ. ಅವರಿಗೆ ಪರೀಕ್ಷೆ ಇಲ್ಲದ ಪ್ರಗತಿ, ಪರಿಶ್ರಮವಿಲ್ಲದ ಫಲ ಬೇಕಾಗಿದೆ.

ಅವರಿಗೆ ಬಾಯಲ್ಲಿ ತುತ್ತಿಟ್ಟರೂ ನುಂಗುವುದು ಕಷ್ಟ ಎಂಬ ಭ್ರಮೆ ಮೂಡಿಸುವುದರಲ್ಲಿ ಪೋಷಕರ ಪಾತ್ರವೂ ಇದೆ.

ಅತಿಯಾಗಿ ಮುದ್ದು ಮಾಡುವುದು, ಕೇಳಿದ್ದನ್ನೆಲ್ಲಾ, ಕಂಡಿದ್ದನ್ನೆಲ್ಲಾ ಕೊಡಿಸುವುದು, ನಡೆದರೆ ಸವೆಯುತ್ತಾರೆಂಬಂತೆ ಓಲೈಸುವುದೇ ಪ್ರೀತಿಯೇ ಎಂದು ಭಾವಿಸಿರುವ ಪಾಲಕರು ಈ ದುಬಾರಿ ಕಾಲದಲ್ಲಿ ಅವರ ಅವಶ್ಯಕತೆಗಳನ್ನು ಪೂರೈಸಲು ಹೆಚ್ಚು ದುಡಿಯಬೇಕಾಗುತ್ತದೆ, ಅದಕ್ಕಾಗಿ ಹಗಲಿರುಳೂ ದುಡಿಯುವ ಭರದಲ್ಲಿ ಮಕ್ಕಳಿಗೆ ತಮ್ಮ ಅಮೂಲ್ಯ ಸಮಯವನ್ನು ನೀಡಲು ಅಸಮರ್ಥರಾಗುತ್ತಾರೆ.

ಯಾರೂ  ಅವರನ್ನು ಏಣಿಯ ಕೊನೆಯ ಮೆಟ್ಟಿಲವರೆಗೂ ಹತ್ತಿಸಲು ಸಾಧ್ಯವಿಲ್ಲ, ಆದ್ದರಿಂದ ಮಕ್ಕಳನ್ನು ಹೆಜ್ಜೆ ಇಡಲು ಪ್ರೇರೇಪಿಸಬೇಕಾಗುತ್ತದೆ. ಜೀವನ ಹೂವಿನ ಹಾದಿಯಲ್ಲ , ಅದರಲ್ಲಿ ಮುಳ್ಳುಗಳೂ ಸಾಕಷ್ಟಿರುತ್ತವೆ.
ಬದುಕಿನ ಏರುಪೇರುಗಳನ್ನೂ,  ಎಡರುತೊಡರುಗಳನ್ನೂ ಸಮರ್ಥವಾಗಿ ನಿಭಾಯಿಸಿಕೊಂಡು, ಸಫಲತೆಯನ್ನು ಪಡೆಯಬೇಕಾದರೆ, ಶಿಸ್ತು, ಸಂಯಮಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ. ಜೀವನ ಎನ್ನುವ ಪರೀಕ್ಷೆಯನ್ನು ಎದುರಿಸಲು ಮಕ್ಕಳನ್ನು ತರಬೇತುಗೊಳಿಸುವ ಹೊಣೆ ಮನೆಯಲ್ಲಿ ಪೋಷಕರಿಗಿದ್ದಂತೆ.  ಶಾಲೆಯಲ್ಲಿ ಉಪಾಧ್ಯಾಯರಿಗಿರುತ್ತದೆ.

ಹಾಗೆ ನಾವು ನಮ್ಮ ನಾಳಿನ ಭರವಸೆಯ ಆಶಾಕಿರಣಗಳೂ. ಭವಿಷ್ಯದ ಭಾಗ್ಯ ಜ್ಯೋತಿಗಳೂ ನಮ್ಮ ದೇಶವನ್ನು ಕಟ್ಟುವ ಹೊಣೆಯನ್ನು ಹೊರಬೇಕಾಗಿರುವವರೂ ಆದ ನಮ್ಮ ಮಕ್ಕಳನ್ನು ಪ್ರತಿ ಕ್ಷಣವೂ ಸನ್ಮಾರ್ಗದತ್ತ ನಡೆಸುತ್ತಾ, ಅವರ ಜ್ಞಾನದ ಪರಿಧಿಯನ್ನು ವಿಸ್ತರಿಸುತ್ತಾ, ಅವರಿಗೆ ಮಾರ್ಗದರ್ಶನಮಾಡಿದರೆ ಅನು ದಿನವೂ ಮಕ್ಕಳ  ದಿನವೇ ಅಲ್ಲವೇ?

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ