ಶನಿವಾರ, ನವೆಂಬರ್ 3, 2012

ರಸಋಷಿ ಕುವೆಂಪು














ಕನ್ನಡ ರಾಜ್ಯೋತ್ಸವದ ದಿನ ಅಕಸ್ಮಾತ್ತಾಗಿ ಟಿವಿ ಹಾಕಿದಾಗ ' ರಸಋಷಿ ಕುವೆಂಪು....' ಎಂಬ ಸಿನೆಮಾ ಪ್ರಸಾರವಾಗುತ್ತಿತ್ತು.

 'ಹೀಗೊಂದು  ಸಿನೆಮಾ ಬಂದಿತ್ತೇ.........'?ಎಂದು  ಕುತೂಹಲದಿ೦ದ ನೋಡಲು ಕುಳಿತವಳಿಗೆ ಬಿಟ್ಟೇಳಲು ಮನಸ್ಸಾಗಲಿಲ್ಲ.

ಅದು ನಮ್ಮ ರಾಷ್ಟ್ರ ಕವಿ ಕುವೆಂಪು ಅವರ ಜೀವನ ಚರಿತೆಯನ್ನಾಧರಿಸಿ ಮಾಡಲಾದ ಚಲನ ಚಿತ್ರ
.
ಅದರಲ್ಲಿ ಪಾತ್ರಮಾಡಿರುವ ಕಲಾವಿದರ ಭಾಷೆ, ಮಾತಾಡುವ ಶೈಲಿ, ಉಡುಗೆ ತೊಡುಗೆ,ಎಲ್ಲವೂ ಎಷ್ಟು ಸಹಜವಾಗಿವೆ ಎಂದರೆ ಅಲ್ಲಿ ಇರುವವರು ಕುವೆಂಪು ಅಲ್ಲ,  ಅವರಂತೆ ಅಭಿನಯಿಸುತ್ತಿರುವ ನಟರು ಎಂದೇ ಅನಿಸುವುದಿಲ್ಲ
.
ನಾನು ನೋಡುವಾಗ  ಕುವೆಂಪು ಅವರ ಬಾಲ್ಯದ ಪ್ರಸಂಗಗಳು ಆಗಿಹೋಗಿದ್ದವು. " ಅಯ್ಯೋ! ಮೊದಲಿಂದ ನೋಡಲಿಲ್ಲವಲ್ಲಾ..... " ಅನ್ನಿಸಿತು.

 ಒಬ್ಬ ಸಂಶೋಧಕಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಕುವೆಂಪು ಅವರು ನೆನಪಿನ ಪುಟಗಳಲ್ಲಿ ತೇಲಿ ಹೋಗುವ ಕಲ್ಪನೆ ಮನೋಹರವಾಗಿದೆ.

ಮುಂದೆ ನೋಡುತ್ತಾ ಹೋದಂತೆ ಅವರ ತರುಣಾವಸ್ಥೆಯಲ್ಲಿ ತಮ್ಮ ಮಾರ್ಗ ಯಾವುದು? ಆಧ್ಯಾತ್ಮವೋ, ಸಂಸಾರವೋ ಎಂಬ ದ್ವಂದ್ವದಲ್ಲಿ ಸಿಲುಕಿದಾಗ ಅವರ ಗುರುಗಳು ಸರಿದಾರಿ ತೋರುವ ರೀತಿ ಮನೋಜ್ಞವಾಗಿದೆ.


ಯಾವಾಗ  ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳುವಾಗ ದ್ವಂದ್ವವು ಎದುರಾಗುತ್ತದೋ, ಆಗ ಗುರುವಿನ ಮಾರ್ಗದರ್ಶನದ ಅನಿವಾರ್ಯತೆ ತೋರುತ್ತದೆ. ಕೇವಲ ಸುದೈವಿಯಾದವನು ಸದ್ಗುರುವಿನ ಕೃಪೆಗೆ ಪಾತ್ರನಾಗಿ, ಸನ್ಮಾರ್ಗದತ್ತ ನಡೆಸಲ್ಪಡುತ್ತಾನೆ. ಹಾಗೂ ಅಂತಹವನು ಮಾತ್ರ ಕುವೆಂಪು ಅವರಂತೆ ಮಹಾನ್ ವ್ಯಕ್ತಿಯಾಗುತ್ತಾನೆ.


ಇದು ಎಲ್ಲ ಜೀವನ ಚರಿತ್ರೆಗಳಂತೆ ಸಪ್ಪೆಯಾಗಿರದೇ ಅಲ್ಲಲ್ಲಿ ಕವಿವರ್ಯರ ಮಾಧುರ್ಯಪೂರ್ಣ ಗೀತೆಗಳಿಗೆ ಅಳವಡಿಸಲಾದ ಮನೋಹರ ನೃತ್ಯಗಳನ್ನು ಸೇರಿಸಲಾಗಿತ್ತು.

 ಅಲ್ಲದೆ ಸಾಂದರ್ಭಿಕವಾಗಿ ಅವರ 'ಜಲಗಾರ' ನಾಟಕದ ಕೆಲ ಭಾಗಗಳು ಆ ನಾಟಕವನ್ನು ಓದದವರೂ ಓದಬೇಕೆನ್ನಿಸುವ ಹಾಗೆ ಮಾಡಿತು.


" ಊರ ತೋಟಿಯು ನೀನು ಜಗದ ತೋಟಿಯು ನಾನು......." ಭಗವಾನ್  ಶಿವನ ಬಾಯಲ್ಲಿ ಶ್ರೀಯುತರು ನುಡಿಸಿದ ಮಾತು ಎಷ್ಟೊಂದು ಅರ್ಥಪೂರ್ಣವಾಗಿದೆ!


ಚಿತ್ರದ ಕೊನೆಯಲ್ಲಿ ಅವರು ದೈವಾಧೀನ ರಾಗಿದ್ದನ್ನು ಸಾಂಕೇತಿಕವಾಗಿ ತಿಳಿಸುತ್ತಾ ಮುಗಿಸಿದಾಗ " ಇಷ್ಟು ಬೇಗ ಮುಗಿದು ಹೋಯ್ತಲ್ಲಾ......" ಅನ್ನಿಸಿತು.


ಇದೊಂದು ಪ್ರತಿಯೊಬ್ಬ  ಕನ್ನಡಿಗನೂ ನೋಡಲೇ ಬೇಕಾದ ಚಿತ್ರ ಎನ್ನುವುದು ನಿಸ್ಸಂಶಯ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ