ಶನಿವಾರ, ಅಕ್ಟೋಬರ್ 27, 2012

ನಾನು ಕ೦ಡ ಪರಮಹ೦ಸರು



                               ನಾನು ಕ೦ಡ ಪರಮಹ೦ಸರು

ಹೀಗೊಬ್ಬ ವ್ಯಕ್ತಿ ಇರಲು ಸಾಧ್ಯವೇ...........?
ಸದಾ ಸ್ವಾಧ್ಯಾಯ ನಿರತರಾಗಿ, ತಮ್ಮ ಜೀವನವನ್ನೇ ಪ್ರತಿಫಲಾಕಾಂಕ್ಷೆ ಇಲ್ಲದೇ. ಜ್ಞಾನದಾನ, ವಿದ್ಯಾದಾನ ಮಾಡಲು ಹಾತೊರೆಯುವವರು............?
ಸ್ತುತಿ ನಿಂದೆಗಳೆರಡನ್ನೂ ಸಮಾನವಾಗಿ ಸ್ವೀಕರಿಸುವವರು........?
ಉದ್ದಾಮ ಪಂಡಿತರಾದರೂ ಕೀರ್ತಿ ಲಾಲಸೆ ಇಲ್ಲದವರು.......?
ಅಸದೃಶ ಕವಿತಾ ಪ್ರೌಢಿಮೆ ಇದ್ದರೂ ಪ್ರಚಾರ ಲೋಲುಪ್ತಿ ಇಲ್ಲದವರು........?
ಪ್ರಾಪಂಚಿಕ  ಜಗತ್ತಿನಲ್ಲಿ ಕಮಲಪತ್ರದಂತೆ ಸಂಸಾರಕ್ಕೆ ಅಂಟಿಯೂ ಅಂಟದ0ತ್ತಿದ್ದವರು............?.
ಹೀಗೊಬ್ಬ ಮಹಾನ್ ಸಾಧಕರಿದ್ದರುಪ್ರತಿ ಮಾತನ್ನೂ ಕಾವ್ಯವಾಗಿಸಬಲ್ಲ. ಪ್ರತಿ ಭಾವವನ್ನೂ ಗೀತೆಯಾಗಿಸಬಲ್ಲ, ಪ್ರತಿ ಜೀವಿಯಲ್ಲೂ ದೈವತ್ವವನ್ನೇ ಕಾಣಬಲ್ಲ ಮಹಾನ್ ಚೇತನ.........
 ಇಪ್ಪತ್ತೇಳು ವರ್ಷಗಳ ಕೆಳಗೆ ಭೌತಿಕ ಜಗತ್ತನ್ನು ತೊರೆದು ಪಂಚಭೂತಗಳಲ್ಲಿ ಲೀನವಾದರು. ಅವರ ಸ್ವಸ್ಥಾನವಾದ  ಭಗವಂತನ ಚರಣಾರವಿಂದಕ್ಕೇ ಹಿಂತಿರುಗಿದರು.
ಇವರೇ ಸಂಸ್ಕೃತ ವಿದ್ವಾನ್, ಕನ್ನಡ ಮತ್ತು ಹಿಂದಿ  ಪಂಡಿತ್  ಬಿ. ವೆಂಕಟರಾಮ ಭಟ್ಟರು.
ಎಲ್ಲ ಕಾಲದಲ್ಲೂ ಅನೇಕಾನೇಕ ಪ್ರತಿಭಾವಂತ ವಿದ್ವಾಂಸರೂ, ಅಪ್ರತಿಮ ಕವಿಗಳೂ, ಇದ್ದೇ ಇರುತ್ತಾರೆ. ಆದರೆ ಇಂತಹ ಶಿಶು ಸದೃಶ ನಿರ್ಮಲಾಂತಃಕರಣ ಉಳ್ಳ, ಇಡೀ ಜಗತ್ತನ್ನೇ ನಿಷ್ಕಲ್ಮಶವಾಗಿ ಪ್ರೀತಿಸುವ, ದ್ವೇಷದ ಪದವನ್ನೇ ಅರಿಯದತನ್ನನ್ನು ತಿರಸ್ಕರಿಸುವವರನ್ನೂ,ವಂಚಿಸುವವರನ್ನೂ ಆದರಿಸುವ ಇವರಂಥವರು ಅತಿ ವಿರಳ.    ಇವರನ್ನು  ' ಪರಮಹಂಸರು' ಎಂದರೆ ಅತಿಶಯೋಕ್ತಿಯಲ್ಲ.
ಕವಿತೆಗಳನ್ನು ಛಂದೋಬದ್ಧವಾಗಿ, ವ್ಯಾಕರಣ ದೋಷವಿಲ್ಲದೇ, ಸರಾಗವಾಗಿ ರಚಿಸಬಲ್ಲವರಾಗಿದ್ದ ಇವರು ಜೀವನದ ಬಹು ಸಮಯವನ್ನು ಸಾಹಿತ್ಯ ಕೃಷಿಯಲ್ಲೇ ಸವೆಸಿದರು. ಹಗಲಿರುಳೆನ್ನದೇ, ಯಾವ ಟೀಕೆ, ನಿಂದನೆ ಹಾಗೂ ಮೂದಲಿಕೆಗಳಿಗೆ ಕಿವಿಗೊಡದೇ ಬರೆದೇ ಬರೆದರು.
ಏತಕ್ಕಾಗಿ ಬರೆದರು........? .
ಪ್ರಶಂಸೆ, ಪ್ರಸಿದ್ಧಿ, ಸನ್ಮಾನ ಅಥವಾ ಸಂಪತ್ತಿಗಾಗಿಯೇ.......? ಖಂಡಿತಾ ಇಲ್ಲ!
.ಕೇವಲ ಆತ್ಮತೃಪ್ತಿಗಾಗಿ, ಆತ್ಮಾನ೦ದಕ್ಕಾಗಿ." ನೀವೇಕೆ ಬರೀತೀರಿ? ಇದರಿಂದ ಏನು ಪ್ರಯೋಜನ......?" ಅಂತ ಯಾರಾದರೂ ಕೇಳಿದರೆ  " ನವಿಲು ನರ್ತಿಸುವುದು, ಕೋಗಿಲೆ ಹಾಡುವುದು ಯಾರಾದರೂ ಮೆಚ್ಚಲಿ ಎಂದೇ.........?'' ಎಂದು ನಗುತ್ತಾ ಉತ್ತರಿಸಿ ಬಿಡುತ್ತಿದ್ದರು.
ಯಾರಾದರೂ ಸಾಹಿತ್ಯಾಸಕ್ತರು ಕೇಳಿದರೆ ಅವರ ಕಾವ್ಯವನ್ನು ಉತ್ಸಾಹದಿಂದ ಓದಿ, ವಿವರಿಸುತ್ತಿದ್ದ ಅವರು ಎಲ್ಲರನ್ನೂ ಸಹೃದಯರೆಂದೇ ನಂಬಿದ್ದರು. ನಮಸ್ಕರಿಸಿದವರಿಗೆಲ್ಲಾ " ಯದಿಚ್ಛಸಿ ತದಸ್ತುತೇ......." ಎಂದು ಮಮತೆಯಿಂದ ಆಶೀರ್ವದಿಸುತ್ತಿದ್ದರು.
 ಪಾಠ ಹೇಳಿ ಎಂದವರಿಗೆಲ್ಲಾ ವಯಸ್ಸಿನ, ದೇಹಸ್ಥಿತಿಯ, ಸಮಯಾಸಮಯದ ಪರಿವೆ ಇಲ್ಲದೇ, ಪ್ರತಿಫಲಾಪೇಕ್ಷೆ ಇಲ್ಲದೇ ವಿದ್ಯಾದಾನ ಮಾಡುತ್ತಿದ್ದರು.ಹಲವಾರು  ಸಂಸ್ಕೃತ ಕೃತಿಗಳನ್ನು ರಚಿಸಿರುವ ಶ್ರೀಯುತರು ಸಾಂಪ್ರದಾಯಿಕ ಸಾಹಿತ್ಯ ಶೈಲಿಗೇ ಜೋತು ಬಿದ್ದವರಲ್ಲ. ಬದಲಾಗಿ ಹೊಸ ಪ್ರಯೋಗಗಳಿಗೆ ನಾಂದಿ ಹಾಡುತ್ತಿದ್ದರು.
ಪ್ರಥಮ ಬಾರಿಗೆ ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಪ್ರಚಲಿತವಾಗಿರುವ ಭಾಮಿನೀ, ವಾರ್ಧಕಗಳಂಥ ಛಂದಸ್ಸುಗಳಲ್ಲಿ ಸಂಸ್ಕೃತದಲ್ಲಿ ಮಹಾ ಕಾವ್ಯವನ್ನು  ರಚಿಸಿದ ಹೆಗ್ಗಳಕೆ ಶ್ರೀಮಾನ್ ಭಟ್ಟರಿಗೇ ಸಲ್ಲುತ್ತದೆ. ಅವರು ರಚಿಸಿದ ಇನ್ನೆರಡು ಮಹಾ ಕಾವ್ಯಗಳೆಂದರೆ ಮೋಹನಾಯನಮ್ ( ಗಾಂಧೀಜಿಯವರ ಜೀವನ ಚರಿತ್ರೆ) ಹಾಗೂ ಶಂಕರ ವಿಜಯಮ್. .ಇದಲ್ಲದೆ ಸತಿ ಮಹಾಶ್ವೇತಾ, ಸತ್ಯವಿಜಯಂ ಮುಂತಾದ ನಾಟಕಗಳನ್ನೂ, ಅಂಗದ ಸಂವಾದ ಎಂಬ  ಗೀತರೂಪಕವನ್ನೂ ಅದೇ ಹೆಸರಿನ ಯಕ್ಷಗಾನ ರೂಪಕವನ್ನೂ ರಚಿಸಿ ಎಲ್ಲಾ ಪ್ರಕಾರದ ಸಾಹಿತ್ಯಪ್ರಕಾರದಲ್ಲೂ  ಬರೆಯುವ ತಮ್ಮ ಕೌಶಲ್ಯವನ್ನು  ನಿರೂಪಿಸಿದ್ದಾರೆ.
ಇವರು ಕನ್ನಡದಿಂದ ಸಂಸ್ಕೃತಕ್ಕೆ ಅನುವಾದ ಮಾಡಿದ ಡಿವಿಜಿಯವರ ಮಂಕುತಿಮ್ಮನ ಕಗ್ಗ
 ( ಮಂದತಿಮ್ಮ ಸಮಸ್ಯಾ) ಪುಣ್ಯಕೋಟಿ ಕಥಾ, ರತ್ನಾಕರ ಶತಕ ಮುಂತಾದುವು ಮೂಲ ಕವಿಯ ಆಶಯ, ಕಾವ್ಯದ ಭಾವ, ಅರ್ಥಗಳಿಗೆ  ಧಕ್ಕೆಯಾಗದಂತೆ  ರಚಿಸಿದ್ದಾರೆ. ಅನೇಕಾನೇಕ ಸ್ತುತಿಗಳನ್ನೂ, ಸುಪ್ರಭಾತಗಳನ್ನೂ ರಚಿಸಿದ್ದಾರೆ. 'ಆರ್ಯಾಸಾಹಸ್ರಿ ಇವರ ಮೇರು ಕೃತಿಗಳಲ್ಲೊಂದು. ಮಾತೆ ಲಲಿತಾದೇವಿಯ ಸಹಸ್ರನಾಮಾವಳಿಯ ಆಂತರಂಗಿಕವಾದ ಪಾರಮಾರ್ಥಿಕವಾದ ಆಶಯಗಳನ್ನು ಹೊಂದಿರುವ, ಅಕಾರಾದಿ ಕ್ರಮದಲ್ಲಿ, ಮನೋಹರವಾದ. ಲಾಲಿತ್ಯಪೂರ್ಣವಾದ ಶ್ಲೋಕಗಳ ರಚನೆ ಅವರ ಭಾಷಾ ಪಾಂಡಿತ್ಯಕ್ಕೆ ಕನ್ನಡಿಯಂತಿವೆ. ಸೂರ್ಯ ನಾರಾಯಣನನ್ನು ಕುರಿತ ಭಾರ್ಗವ ಶತಕಂ ಅವರ ಇನ್ನೊಂದು  ಅಮೋಘ ಕೃತಿ.
 ಈಗ ಮಂದತಿಮ್ಮ ಸಮಸ್ಯಾ ಅನುವಾದ ಕೃತಿಯನ್ನು ಪ್ರಕಟಿಸಲು ಡಿವಿಜಿ ಬಳಗದವರು ಮುಂದೆ ಬಂದಿರುವುದು ಸಂಭ್ರಮದ ವಿಷಯ. ಇದಲ್ಲದೆ ತೆಲುಗಿನ ವೇಮನ ವಚನಗಳನ್ನು 'ವೇಮೋಕ್ತ ಸೂಕ್ತಿ ಕುಸುಮಾಂಜಲಿ' ಎಂಬ ಹೆಸರಿನಲ್ಲಿ ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. ಸರ್ವಜ್ಞನ ವಚನಗಳು, ಅಕ್ಕಮಹಾದೇವಿಯ ವಚನಗಳು, ಸಂಗಮೇಶನ ವಚನಗಳು, ಬಸವಣ್ಣವನರ ವಚನಗಳು ಹೀಗೇ ಅನೇಕ  ಕನ್ನಡದ  ವಚನ ಸಾಹಿತ್ಯದ ಸೊಬಗನ್ನು ಸಂಸೃತದ ದರ್ಪಣದಲ್ಲಿ ಇನ್ನೂ ಥಳಥಳಿಸುವಂತೆ ಮಾಡಿದ್ದಾರೆ.
ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಇವರು ರಚಿಸಿರುವ ವ್ಯಾಕರಣ ಸುಲಲಿತವಾಗಿದ್ದು  ಕಬ್ಬಿಣದ ಕಡಲೆಯಂಥಾ ವ್ಯಾಕರಣವನ್ನು  ಸುಲಭವಾಗಿ ಅರಗುವ ಸಿಹಿ ಹಲ್ವಾ ಅನಿಸುವಂತೆ ಮಾಡಿರುವುದು ಅವರ  ಬೋಧನಾ  ಚಾತುರ್ಯಕ್ಕೆ  ಸಾಕ್ಷಿಯಾಗಿದೆ.
 ತಮ್ಮ ಸೇವಾವಧಿಯಲ್ಲಿ ಶಾಲಾ ಮಕ್ಕಳಿಗಾಗಿ ರಚಿಸಿದ ಸಂಪೂರ್ಣ ಮಹಾ ಭಾರತ, ಭಗವದ್ಗೀತೆ, ಮುಂತಾದ ಹಲವಾರು ಸಂಸ್ಕೃತ ಹಾಗೂ ಕನ್ನಡ ನಾಟಕಗಳು. ಅನೇಕ ಸಾಮಾಜಿಕ ನಾಟಕಗಳು, ದೇಶ ಭಕ್ತಿಗೀತೆಗಳು ಮತ್ತು ಭಾವಗೀತೆಗಳು, ಕನ್ನಡ ಕೋಲಾಟದ ಧಾಟಿಯಲ್ಲಿ ರಚಿಸಿದ 'ಯಷ್ಟಿಖೇಲನಮ್' ಮುಂತಾದ ಅನೇಕಾನೇಕ ಕವನಗಳು. ಕನ್ನಡ ಭಾವಗೀತೆಗಳು. ಹೀಗೇ ಪಟ್ಟಿ ಮಾಡುತ್ತಾ ಹೋದರೆ  ಅವುಗಳ ಅಗಾಧತೆ ಮನನವಾಗುತ್ತದೆ. ಅವರ ಅನೇಕಾನೇಕ   ಕೃತಿಗಳು ಈಗ ಅಲಭ್ಯವಾಗಿರುವುದು ನಮ್ಮ ದುರ್ದೈವ.
ಇವರಿಂದ ರಚಿತವಾದ ಸಂಸ್ಕೃತ ಹಾಗೂ ಕನ್ನಡ ದೇಶ ಭಕ್ತಿಗೀತೆಗಳಲ್ಲಿ ಅವರಿಗಿದ್ದ ದೇಶಾಭಿಮಾನ ಎದ್ದು ಕಾಣುತ್ತದೆ. ಮಹಾತ್ಮ ಗಾಂಧೀಜಿಯವರ  ಬಗೆಗಿದ್ದ ಅವರ ಅಸೀಮ ಅಭಿಮಾನ ಅವರ ಕೃತಿ ಮೋಹನಾಯನದಲ್ಲಿ  ಸುಸ್ಪಷ್ಟವಾಗಿ ಕಾಣುತ್ತದೆ.  ಮಹಾತ್ಮ ಗಾಂಧೀಜಿಯವರ ಹತ್ಯೆಯಾದ ನಂತರ  ಅತೀವ ಘಾಸಿಗೊಂಡ  ಅವರು  ಇನ್ನು ಮುಂದೆ ಕಾಲಿಗೆ ಚಪ್ಪಲಿ ಧರಿಸುವುದಿಲ್ಲ ಎಂದು ಶಪಥ ಮಾಡಿದವರು ಅದನ್ನು ಕೊನೆಯವರೆಗೂ ವ್ರತದಂತೆ ಪಾಲಿಸಿದರು.
ಇಂತಹ ಮಹಾನ್ ಸಾಧಕ, ಬೋಧಕ, ಚಿಂತಕ  ವಿದ್ವಾಂಸರಾದ ಋಷಿ ಸದೃಶ ವ್ಯಕ್ತಿಯ ಮಗಳಾದದ್ದು ನನ್ನ ಪೂರ್ವ ಜನ್ಮದ ಪುಣ್ಯ ವಿಶೇಷವೇ ಸರಿ.ಎಂದು ಅಪರಿಮಿತ ಆನಂದವಾದರೂ ದೀಪದ ಕೆಳಗಿನ ಕತ್ತಲೆಯಲ್ಲೇ ಇರುವ ಕ್ರಿಮಿಯಂತೆ ಅವರ ಪ್ರಜ್ವಲಿಸುವ ಜ್ಞಾನದ  ಪ್ರಕಾಶವನ್ನು ಕಿಂಚಿನ್ಮಾತ್ರ ಉಪಯೋಗವನ್ನೂ ಮಾಡಿಕೊಳ್ಳದೇ  ಅವರನ್ನು ಕಳೆದುಕೊಂಡ ನಂತರ ಪರಿತಪಿಸುತ್ತಿರುವುದಕ್ಕಾಗಿ  ಲಜ್ಜೆಯೂ, ಸಂಕಟವೂ ಆಗುತ್ತಿದೆ.
ಪ್ರತಿ  ದಿನವೂ ಅಪ್ಪ ಬೆಳಗಿನ ನಾಲ್ಕು ಗಂಟೆಗೇ ಎದ್ದು ಬರೆಯಲು ಆರಂಭಿಸುತ್ತಿದ್ದರು. ನಂತರ ಕಾಫಿ ಕುಡಿದು  ಸ್ನಾನ ಮಾಡಿ ಹೊರ ಬರುತ್ತಲೇ  ಶ್ಲೋಕಗಳನ್ನು ಗಟ್ಟಿಯಾಗಿ ಹೇಳ ತೊಡಗುತ್ತಿದ್ದರು.  ಕೊನೆಯವರೆಗೂ  ಒಂದು ದಿನವೂ ಅವರು  ಸಂಧ್ಯಾವಂದನೆ ಮತ್ತು ಪೂಜೆಯನ್ನು ತಪ್ಪಿಸಿರಲಿಲ್ಲ. ಹಾಗಾಗಿ ನಮಗೆಲ್ಲಾ ಪೂಜೆಯ ಮಂತ್ರ ಬಾಯಿಪಾಠವಾಗಿತ್ತು.  ಪೂಜೆಯ ನಂತರ  ಶ್ರೀ ಸೂಕ್ತ, ಪುರುಷ ಸೂಕ್ತ ,ರಾಮರಕ್ಷಾ ಮಂತ್ರಗಳನ್ನು ಹೇಳುತ್ತಿದ್ದರು. ಶಿವ ಮಾನಸ ಪೂಜಾ ಸ್ತೋತ್ರವನ್ನು ಹೇಳುತ್ತಿದ್ದರು. ಅದು ನನಗೆ ಬಹಳ ಇಷ್ಟವಾಗಿ, ಅದರ ಅರ್ಥ ಕೇಳಿದಾಗ   ಅದನ್ನು ಮನದಟ್ಟಾಗುವಂತೆ ವಿವರಿಸಿದ್ದರು.  ನಮ್ಮ ಪ್ರತಿಯೊಂದು ಮಾತು ಕೃತಿಗಳಲ್ಲೇ ದೇವರನ್ನು ಆರಾಧಿಸಬಹುದನ್ನುವ ಕಲ್ಪನೆ ನನಗೆ ಅತಿವಿಶಿಷ್ಟವಾಗಿ ಕಂಡುಬಂದಿತ್ತು. ಅವರ ಕೃತಿಗಳನ್ನು  ವಿಂಗಡಿಸುವಾಗ ದೇವೀಮಾನಸ ಪೂಜಾ ಸ್ತೋತ್ರವೂ ದೊರೆಯಿತು.   ಪ್ರಾಯಶಃ ಅವರು ಅಹರ್ನಿಶಿ ಮಾನಸಪೂಜೆಯಲ್ಲೇ ನಿರತರಾಗಿರುತ್ತಿದ್ದರೇನೋ. ಅದರಿಂದಲೇ ವ್ಯಾವಹಾರಿಕ ಪ್ರಪಂಚದಲ್ಲಿ ಆಸಕ್ತಿ ಬೆಳೆಸಿಕೊಳ್ಳಲೇ ಇಲ್ಲ.    ಅದನ್ನರಿತ ನನ್ನ ಅಣ್ಣಂದಿರು  ಅವರೆಲ್ಲಾ ಜವಾಬ್ದಾರಿಗಳಿಗೂ ಹೆಗಲು ಕೊಟ್ಟು ನಿಭಾಯಿಸಿಬಿಟ್ಟಿದ್ದು ಅವರ ಮೇಲೆ   ದೈವೀ ಅನುಗ್ರಹವಿದ್ದುದ್ದಕ್ಕೆ ಸಾಕ್ಷಿ ಎನಿಸುತ್ತದೆ.
ಅವರಿಗೆ  ವ್ರತಗಳನ್ನು ಮಾಡಿಸುವುದರಲ್ಲಿ ತುಂಬಾ ಆಸಕ್ತಿಯಿತ್ತು. ನನಗೆ ಬುದ್ಧಿ ಬಂದಾಗಿನಿಂದ ನಮಗೆ ಪ್ರತೀ ವರ್ಷ  ಭೀಮನ ಅಮಾವಾಸ್ಯೆಯ ವ್ರತವನ್ನು ಮಾಡಿಸುತ್ತಿದ್ದರು.  ಯಾವುದೇ ವ್ರತವಿರಲಿ ಅಂದು ನಮಗಿಂತಾ ಬೇಗ ಎದ್ದು ಸ್ನಾನಮಾಡಿ ವ್ರತಕ್ಕೆ ಬೇಕಾದ ಎಲ್ಲಾ ಸಿದ್ಧತೆಯನ್ನೂ ಮಾಡಿಕೊಳ್ಳುತ್ತಿದ್ದರು.  ಎಲ್ಲಾ ವ್ರತಗಳ  ಮಂತ್ರಗಳೂ, ವ್ರತ ಕಥೆಗಳೂ ಅವರಿಗೆ ಕಂಠಸ್ಥವಾಗಿದ್ದವು.  ನಾಗರಪಂಚಮಿಯ ದಿನ ಅಮ್ಮ ಮಣ್ಣಿನಲ್ಲಿ ನಾಗ ದೇವತೆಯನ್ನು ಮಾಡುತ್ತಿದ್ದರು ಹಾಗೂ ನಾವೆಲ್ಲಾ ಅದಕ್ಕೆ ಭಕ್ತಿಯಿಂದ ಹಾಲೆರೆದು ಪೂಜಿಸುತ್ತಿದ್ದೆವು.  ಹಾಗೂ   ಶಿರಿಯಾಳ ಷಷ್ಠಿಗೆ  ಶಿರಿಯಾಳನ  ಗೊಂಬೆ ಮಾಡುತ್ತಿದ್ದರು. ಅದಕ್ಕೆ ಬೇಕಾದ  ಹುತ್ತದ ಮಣ್ಣನ್ನು ಅಪ್ಪ ಎಲ್ಲಿಂದಲೋ ತಂದುಕೊಡುತ್ತಿದ್ದರು.  ನಾನು ನನ್ನ ಬಾಣಂತನಕ್ಕೆ ಹೋದಾಗ  ಅದೇ ಸಮಯದಲ್ಲಿ ನನ್ನ ಅತ್ತಿಗೆ ಸುಜಾತಾ ಸಹಾ  ಗರ್ಭಿಣಿಯಾಗಿ ಬಂದಿದ್ದಳು.  ಅಪ್ಪ ನಮಗಿಬ್ಬರಿಗೂ ಪ್ರತಿದಿನವೂ ಯಾವುದಾದರೊಂದು ಒಳ್ಳೆಯ ಕಥೆ ಹೇಳುತ್ತಿದ್ದರು. ನನ್ನ ಅಣ್ಣಂದಿರು ನನ್ನ ಆರೈಕೆಯ ಹೊಣೆಯನ್ನು ಪೂರ್ತಿ ಹೊತ್ತಿದ್ದರೂ ಅವರ  ಮಮತೆಯ ಕಣ್ಗಾವಲಿನ ರಕ್ಷಣೆಯ ಅರಿವು ಸದಾ ನನಗೆ ಆಗುತ್ತಿತ್ತು.
ನನ್ನ ಮಗಳು  ಮಾತು ಕಲಿಯುವಾಗ ಅವಳಿಗೆ ಚಿಕ್ಕ ಚಿಕ್ಕ ಭಜನೆಗಳನ್ನು ಸ್ತೋತ್ರಗಳನ್ನು ಕಲಿಸುತ್ತಿದ್ದರು. ಅವಳದನ್ನು ಬಾಲ ಭಾಷೆಯಲ್ಲಿ ಹೇಳುವುದನ್ನು ಕೇಳಲು ಅವರಿಗೆ ತುಂಬಾ ಇಷ್ಟವಾಗುತ್ತಿತ್ತು. ಅವಳನ್ನು “ ಅಪೂರ್ವ ಚಿಂತಾ ಮಣಿಯಮ್ಮನವರೇ” ಅಂತ ತಮಾಷೆಯಾಗಿ ಕರೆಯುತ್ತಿದ್ದರು.
ನನ್ನ ಅಕ್ಕನ ಮಕ್ಕಳು ಚಿಕ್ಕವರಿದ್ದಾಗ   ಮತ್ತು ನನ್ನ ಮಗಳು ಚಿಕ್ಕವಳಾಗಿದ್ದಾಗ ಅವರನ್ನು ಮಲಗಿಸುವಾಗ ಶ್ಲೋಕಗಳನ್ನು ಹಾಡಿನ ಹಾಗೆ ಹಾಡುತ್ತಿದ್ದರು. ಅದರಲ್ಲಿ ಮುಕುಂದಮಾಲಾ ಸ್ತೋತ್ರವೂ ಒಂದು.  ಅದರಲ್ಲಿ ಒಂದು ಶ್ಲೋಕದ ಅರ್ಥ ಅವರು ವಿವರಿಸಿದ್ದು ನನಗಿನ್ನೂ  ನೆನಪಿದೆ.
ಕೃಷ್ಣ ತ್ವದೀಯ ಪದಪಂಕಜಪಂಜರಾಂತಮ್
ಅದ್ಯೈವ ಮೇ ವಿಶತು ಮಾನಸ ರಾಜ ಹಂಸಃ|
ಪ್ರಾಣ ಪ್ರಯಾಣ ಸಮಯೇ ಕಫವಾತ ಪಿತ್ಥೈಃ
ಕಂಠಾವರೋಹನವಿಧೌ  ಸ್ಮರಣಂ ಕುತಸ್ತೇ||
‘ಕೃಷ್ಣಾ ನಿನ್ನ  ಪಾದಗಳೆಂಬ ಪದ್ಮದ ಕಡೆಗೆ ನನ್ನ ಮನಸ್ಸೆಂಬ ರಾಜ ಹಂಸವು ಇಂದೇ  ಹೋಗಲಿ ಮರಣ ಕಾಲದಲ್ಲಿ  ಕಫ ವಾತ ಪಿತ್ಥಗಳಿಂದ ಗಂಟಲು ಕಟ್ಟಿದಾಗ ನಿನ್ನ ಸ್ಮರಣೆ ಮಾಡಲು ಆಗುವುದೋ ಇಲ್ಲವೋ..  ಎನ್ನುತ್ತಿದ್ದ ಅವರು ಪ್ರಾಣ ನಿಷ್ಕ್ರಮಣ ಕಾಲದಲ್ಲೂ ಅವರ ಅಪೇಕ್ಷೆಯಂತೇ ಅವರ ಮನಸ್ಸು ಭಗವನ್ನಾಮ ಕೀರ್ತನೆಯಲ್ಲೇ ತೊಡಗಿದ್ದುದು ಅವರ ಭಾಗ್ಯ ವಿಶೇಷವಲ್ಲದೇ ಮತ್ತೇನೂ ಅಲ್ಲ.
  ಮನೆಯಲ್ಲಿ ಮಕ್ಕಳಿಗೆ ಗೀತಾ ಪಾಠವಾಗುತ್ತಿತ್ತು. ಅದರೊಡನೆ  ನೀತಿ ಶ್ಲೋಕಗಳನ್ನೂ ಕಲಿಸುತ್ತಿದ್ದರು.   ಪೌರಾಣಿಕ ಕಥೆಗಳನ್ನೂ ಹೇಳುತ್ತಿದ್ದರು.  ಅವರ ಅಂತರಂಗವನ್ನು ಅಗಾಧವಾಗಿ ಆವರಿಸಿಕೊಂಡಿದ್ದ ಮತ್ತೊಂದು ಗ್ರಂಥವೆಂದರೆ ಭಗವದ್ಗೀತೆ . ಅವರು ಭಗವದ್ಗೀತೆಯನ್ನೇ ಉಸಿರಾಡುತ್ತಿದ್ದರೇನೋ ಎಂದು ನನಗೀಗೀಗ ಅನಿಸುತ್ತಿದೆ.   ಅವರು ಭಗವದ್ಗೀತೆಯ ಬಗ್ಗೆ ಬರೆದ ಕೃತಿಗಳು ಅನೇಕ.   ಅನೇಕ ವಿಧದ ಭಗವದ್ಗೀತಾ ನಾಟಕಗಳು,  ಗೀತ ರೂಪಕಗಳು, ಗೀತೆಯ ಸಾರಸ್ವರೂಪವಾದ ಗೀತಾ ನವನೀತಂ,  ಅವರಿಗೆ ಪ್ರಿಯವಾದ ಭಾಮಿನೀ ಛಂದಸ್ಸಿನಲ್ಲಿ ಭಾಮಿನೀ ಭಗವದ್ಗೀತಾ.. ಒಂದೇ ಎರಡೇ..
 ಅದರಲ್ಲಿನ ಸ್ಥಿತಪ್ರಜ್ಞತೆ ಅವರಲ್ಲಿ ಮೈಗೂಡಿತ್ತು ಎಂದು ಆಗ ಅರ್ಥಮಾಡಿಕೊಳ್ಳಲಾಗದ ನಮ್ಮ ಮೌಢ್ಯದ ಬಗ್ಗೆ   ದುಃಖವಾಗುತ್ತದೆ. ಇಂತಹ ದೈವೀ ಸ್ವರೂಪರಾದವರು ಬದುಕಿರುವವರೆಗೂ ಅವರ  ಮಹತ್ವ  ಸುತ್ತಮುತ್ತಲಿನವರಿಗೆ ಅರಿವಾಗುವುದೇ ಇಲ್ಲ..
ಅವರು ಕಾವ್ಯ ಶಾಸ್ತ್ರ ವಿನೋದಗಳಲ್ಲೇ ಮೈ ಮರೆಯುತ್ತಿದ್ದರಾದದ್ದರಿಂದ ಅವರಿಗೆ  ಬೇಸರವೆಂಬುದಾಗುತ್ತಿರಲಿಲ್ಲವಾದರೂ ಅಮ್ಮ ಬೇಸರವಾದಾಗ  ಪಗಡೆ ಆಡಲು ಕರೆದರೆ ನಿರಾಕರಿಸುತ್ತಿರಲಿಲ್ಲ. ಪ್ರತೀ ಬಾರಿಯೂ ಅಮ್ಮನೊಡನೆ ಸಂತೋಷದಿಂದಲೇ  ಸೋಲುತ್ತಿದ್ದರು. ಅವರ ಮನಸ್ಸಿನಲ್ಲಿ ‘ ಅವಳಿಗೆ ಸಂತೋಷವಾದರೆ ಆಗಲಿ... ’ ಎನ್ನುವ ಭಾವವಿದ್ದಂತೆ ಅನಿಸುತ್ತಿತ್ತು. ಅವರು ಸೋಲುವುದು ನನಗೆ ಇಷ್ಟವಾಗದೇ  ನಾನೇ ಅವರ ಪರವಾಗಿ ಆಡಿ ಗೆಲ್ಲಿಸಿದ್ದೂ ಉಂಟು.
ಆ ಕಾಲದ ಅನೇಕ ಕರ್ಮಠ ಬ್ರಾಹ್ಮಣರಲ್ಲಿದ್ದ ಹಾಗೆ ಇವರಲ್ಲಿ ಅತೀ ಜಾತ್ಯಾಭಿಮಾನವಿರಲಿಲ್ಲ.  ವೀರ ಶೈವರೊಡನೆ ಹಾಗೂ  ತ್ರಿಮತಸ್ಥರೊಡನೆ ಆತ್ಮೀಯ  ಸ್ನೇಹವನ್ನು ಇಟ್ಟುಕೊಂಡಿದ್ದರು. ಶಂಕರರ ತತ್ತ್ವಗಳನ್ನು  ಆರಾಧಿಸುವಂತೇ ಬಸವ ತತ್ತ್ವಗಳನ್ನೂ ಗೌರವಿಸುತ್ತಿದ್ದರು. ತಿರುಪ್ಪಾವೈ ಯನ್ನೂ ಆಲಿಸುತ್ತಿದ್ದರು. ಅದನ್ನೂ ಸಂಸ್ಕೃತಕ್ಕೆ ತರ್ಜುಮೆ ಮಾಡಿದ ನೆನಪು.. ಆದರೆ ಅದು ದೊರೆತಿಲ್ಲ.
ಅವರು  ತಾರತಮ್ಯವಿಲ್ಲದೇ ಯಾರೇ ಬಂದರೂ ಆಸಕ್ತಿಯಿಂದ ಪಾಠಮಾಡುತ್ತಿದ್ದರು.  ಮಾನ್ಯ  ಎಂ ಜಿ ಸಿದ್ಧರಾಮಯ್ಯನವರಂಥ ಅನೇಕ ಶಿಷ್ಯರು ಅವರನ್ನು  ನಾಲ್ಕಾರು ದಶಕಗಳ ನಂತರವೂ ನೆನಪಿಡಲು ಸಾಧ್ಯವಿತ್ತೇ? ಪ್ರೊ| ಮಲ್ಲೇಪುರಂ ವೆಂಕಟೇಶ್ ಅವರಂಥ  ಧೀಮಂತ ವ್ಯಕ್ತಿಗಳು ಅವರ ಕೆಲಸ ಮಾಡುತ್ತೇನೆಂದೊಡನೇ  ತಮ್ಮೆಲ್ಲ  ಬಿಡುವಿರದ ಕೆಲಸಗಳನ್ನೂ ಬದಿಗೊತ್ತಿ ನನಗೆ ಮಾರ್ಗದರ್ಶನ ಮಾಡುತ್ತಿದ್ದರೇ? 
ನನಗೆ ಸಣ್ಣ ಪುಟ್ಟ ಕಷ್ಟ , ನಿರಾಸೆಗಳುಂಟಾದಾಗ    ಅಪ್ಪ,
ಸರ್ವಮಂಗಲ ಮಾಂಗಲ್ಯೇ
 ಶಿವೇ ಸರ್ವಾರ್ಥ  ಸಾಧಿಕೇ|
 ಶರಣ್ಯೇ ತ್ರ್ಯಯಂಬಕೇ ಗೌರೀ
ನಾರಾಯಣಿ ನಮೋಸ್ತುತೇ||
ಎಂಬ ಒಂದು ಶ್ಲೋಕವನ್ನೇ  ಭಕ್ತಿಯಿಂದ ಹೇಳು ಸಾಕು. ತಾಯಿ ನಿನ್ನನ್ನು ಕಾಪಾಡುತ್ತಾಳೆ ಎಂದಿದ್ದರು. ಆ ಶ್ಲೋಕದ ಮಹಿಮೆಯೋ ಅಥವಾ ಅವರ ಆಶೀರ್ವಾದವೋ   ನನ್ನ ಬದುಕಿನಲ್ಲಿ ನೆಮ್ಮದಿ ನೆಲಸಿತು.
 ಇಂತಹ ಮಹನೀಯರನ್ನು  ನಾವು ಕಳೆದುಕೊಂಡರೂ ಅವರು ಅವರ ಕೃತಿಗಳಲ್ಲಿ ಜೀವಂತವಾಗಿದ್ದಾರೆ. ಇಂತಹ  ಅಮೋಘವಾದ   ಪ್ರತಿಭಾಶಾಲಿ ವಿದ್ವಾಂಸರು ಇದ್ದರೆಂದೂ, ಅವರ ಕೃತಿಗಳ ಅನನ್ಯತೆಯನ್ನೂ ಮುಂದಿನ ಪೀಳಿಗೆಯವರಿಗೆ ತಿಳಿಸಿಕೊಡುವ ಉದ್ದೇಶದಿಂದ ಅವರ ಕೃತಿಗಳನ್ನು ಸಂಪಾದಿಸುವ  ಮಹತ್ಕಾರ್ಯವನ್ನು ಅವರ ಮಕ್ಕಳಾದ ನಾವೆಲ್ಲರೂ ಕೈಗೆತ್ತಿಕೊಂಡಿರುವುದು ತಡವಾಗಿಯಾದರೂ ಅವಶ್ಯಕವಾದ ಕೆಲಸ. ನಮ್ಮ ಪ್ರಯತ್ನಗಳಿಗೆ ಯಶಸ್ಸು ಸಿಗಲಿ . ಭಗವಂತನ ಕೃಪೆ  ಮತ್ತು ತಂದೆಯವರ ಆಶೀರ್ವಾದ ನಮ್ಮ ಮೇಲೆ ಸದಾ ಇರಲಿ ಎಂದು ಬೇಡುತ್ತೇನೆ.
.  ನಮ್ಮೆಲ್ಲಾ ಕಾರ್ಯಗಳಲ್ಲೂ ನಮಗೆ ಬೆಂಬಲವಾಗಿ ನಿಂತು ಅವರ ಶುಭಾಶೀರ್ವಾದದ ರಕ್ಷೆಯಿತ್ತಿರುವ ನಮ್ಮ ಮಾತೃಶ್ರೀಯವರಿಗೆ ನನ್ನ ಅನಂತಾನಂತ ಭಕ್ತಿಪೂರ್ವಕ ಪ್ರಣಾಮಗಳು.
ಸರ್ವೇ ಜನಾಃ ಸುಖಿನೋ ಭವಂತು
ಸಮಸ್ತ ಸನ್ಮಂಗಳಾನಿ ಭವಂತು
ಇತಿ ಶಂ
ವಸುಮತಿ ರಾಮಚಂದ್ರ
೧೬-೧೧-೧೮
ವಿಳಂಬಿ ಸಂವತ್ಸರದ ಕಾರ್ತಿಕ ಶುದ್ಧ ನವಮಿ.
ಜಿ ೧, ಮಾರುತಿ ಅಪಾರ್ಟ್ಮೆಂಟ್,
೩ನೆ ಎ ತಿರುವು, ೧೬ನೇ ಮುಖ್ಯರಸ್ತೆ,
ಜೆಪಿ ನಗರ ಎರಡನೇ ಹಂತ,
ಬೆಂಗಳೂರು- ೫೬೦೦೭೮






4 ಕಾಮೆಂಟ್‌ಗಳು:

  1. ಸಜ್ಜನರ ಸಹವಾಸ ಹೆಜ್ಜೇನು ಸವಿದಂತೆ ಎಂಬ ವಾಕ್ಯ ಸಾರ್ವಕಾಲಿಕ ಸರಿ.ಇದನ್ನು ಬೀವಿಯವರ ಮಿತ್ರರು,ಅವರ ವಿದ್ಯಾರ್ಥಿಗಳ ಅನುಭವದ ಮಾತೂ ಹೌದು.ಹೀಗಿರುವಾಗ ಅವರ ಮಗಳಾಗಿ ಮನೆಯಲ್ಲಿನ ಅವರ ನಡೆನುಡಿಗಳನ್ನು ಬಲ್ಲವರಾದ ನಿಮ್ಮ ಮಾತು ಅಭಿಪ್ರಾಯಗಳು ಅರ್ಥಪೂರ್ಣ.ತಾವಂದಂತೆ ಗುರುಗಳು ಹಲವು ಭಾಷೆ ಸಾಹಿತ್ಯಗಳ ಎಲ್ಲಾ ಪ್ರಾಕಾರಗಳನ್ನು ಆಳವಾಗಿ ಅಧ್ಯಯನ ನಡೆಸಿ ಪ್ರಯೋಗ ಮಾಡಿದ್ದಾರೆ.ಯಾವುದೂ ಯಾರನ್ನೋ ತೃಪ್ತಿ ಪಡಿಸಲು ಅಲ್ಲ.ಹೀಗಾಗಿ ಆತ್ಮ ಸಾಕ್ಷಾತ್ಕಾರವನ್ನು ಸುಲಭವಾಗಿ ಗಳಿಸಿದ ಧೀಮಂತರು.ಈ ಕಾಲದಲ್ಲೂ ಇಂತಹವರು ಇದ್ದರೇ ಎಂಬ ಉದ್ಗಾರಕ್ಕೆ ಅವಕಾಶ ಮಾಡಿದ ಅಲೌಕಿಕ ವ್ಯಕ್ತಿ ನಮ್ಮ ಗುರುಗಳು ಎಂಬುದು ನಮ್ಮ ಹಿರಿಮೆ.ಬರಹ ವಿಚಾರ ಯೋಗ್ಯ.ಅರ್ಥಪೂರ್ಣ.

    ಪ್ರತ್ಯುತ್ತರಅಳಿಸಿ