ಶನಿವಾರ, ಅಕ್ಟೋಬರ್ 27, 2012

ತುಲನೆ.......




" ಆಸೆಯೇ ದುಃಖದ ಮೂಲ ಎನ್ನುವ ಆರ್ಯ ಸತ್ಯವನ್ನು ಬುದ್ಧ ಕಂಡು ಹಿಡಿದ.   ನಾನೇ ಬುದ್ಧನಾಗಿದ್ದರೆ ಅದಕ್ಕಿಂತ ಹೆಚ್ಚು ಆಳವಾದ ಸತ್ಯವನ್ನೇ ಹೇಳ್ತಿದ್ದೆ; ತುಲನೆಯೇ ದುಃಖದ ಮೂಲ ಅಂತ..... "



ಇದು ಎಸ್. ಎಲ್. ಭೌರಪ್ಪನವರು ಅವರ `ಮಂದ್ರ' ಕೃತಿಯಲ್ಲಿ ರಾಮ್ ಚರಣ ಮಿತ್ತಲ್ ಸಾಹೇಬರ  ಬಾಯಲ್ಲಿ ಆಡಿಸಿದ ಮಾತು ಒಂದು ಸೂಕ್ತಿಯಂತಿದೆ. ಇದು ಒಂದು ಸಾರ್ವಕಾಲಿಕ ಸತ್ಯ.

ನಾವು ನಮ್ಮ ಜೀವನದ ಹಾದಿಯನ್ನೊಮ್ಮೆ ತಿರುಗಿ ನೋಡಿದಾಗ ನಮ್ಮ ಬಹುತೇಕ ಕಳವಳಗಳ ಕಾರಣವು ತುಲನೆಯೇ ಆಗಿರುತ್ತದೆ.

ಹೆಚ್ಚಿನ ಪ್ರಸಂಗಗಳಲ್ಲಿ ನಾವು ನಮಗಿಂತ ಸಿರಿವಂತರನ್ನ ನಮ್ಮೊಂದಿಗೆ ಹೋಲಿಸಿಕೊಂಡು ಕರುಬುತ್ತಾ ನಮ್ಮಲ್ಲೇ ನಾವು ನೋಯುವುದುಂಟು. 

ಹಾಗೇ ನಮಗಿಂತಾ ಸುಂದರವಾಗಿರುವವರೂ, ನಮಗಿಂತಾ ಕೆಲಸ ಕಾರ್ಯಗಳಲ್ಲಿ ಕುಶಲರೂ, ಮಾತಿನಲ್ಲಿ ಜಾಣರೂ, ಜನರನ್ನು ತಮ್ಮ ಕಡೆಗೆ ಸೆಳೆದು ಕೊಳ್ಳಬಲ್ಲವರೂ ಆದ ಜನರನ್ನು ನಮ್ಮೊಂದಿಗೆ ತುಲನೆ ಮಾಡಿಕೊಂಡು ಸಂಕಟ ಪಡುತ್ತೇವೆ. ನಿಷ್ಕಾರಣವಾಗಿ ಅವರನ್ನು ದ್ವೇಷಿಸುತ್ತೇವೆ........  

ನಮ್ಮ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗುತ್ತದೆ..........

"ಮನೆಯೊಳಗಣಾ ಕಿಚ್ಚು ಮನೆಯ ಸುಟ್ಟಲ್ಲದೇ ನೆರೆಮನೆಯ ಸುಡುವುದೇ........?"

ಬಸವಣ್ಣನವರ ಈ ವಚನ ಹೇಳುವಂತೆ ನಾವು ನಮ್ಮ ಹೊಟ್ಟೆ ಉರಿಯಿಂದ , ದ್ವೇಷದ ಕಾಳ್ಗಿಚ್ಚಿನಿಂದ ಕೇವಲ ನಮ್ಮ ಮನವನ್ನು ದಹಿಸಿಕೊಳ್ಳುತ್ತೇವೇ ವಿನಃ ಅದಕ್ಕೆ ಕಾರಣವಾದವರನ್ನಲ್ಲ.

ಆದರೆ ಈ ತುಲನೆ ಕೇವಲ ಅನರ್ಥಕಾರಿಯೇ.........? ಖಂಡಿತಾ ಇಲ್ಲ.....!

ಧನಾತ್ಮಕವಾದ ತುಲನೆ ಮನುಷ್ಯನ ಏಳಿಗೆಗೆ ದಾರಿ ದೀಪವಾಗುವುದು. ತಮಗಿಂತಾ ಜ್ಞಾನಿಗಳನ್ನು ನೋಡಿ ನಾವೂ ಅವರಂತೆ ಆಗಬೇಕೆಂದು ಹೆಚ್ಚು ಅಧ್ಯಯನ ಮಾಡುವವರು ಸುಜ್ಞಾನದ ಹಾದಿಯಲ್ಲಿ ಸಾಗುತ್ತಾರೆ.

ತನಗಿಂತ ದೀನರನ್ನು, ದರಿದ್ರರನ್ನು, ಅಜ್ಞಾನಿಗಳನ್ನು, ತನ್ನೊಂದಿಗೆ ಹೋಲಿಸಿಕೊಂಡು, ಅವರನ್ನು ಅವರನ್ನು ಹೀಯಾಳಿಸದೇ, ಅವರನ್ನು ತಿರಸ್ಕಾರದಿಂದ ತುಚ್ಛವಾಗಿ ಕಾಣದೇ, ಮೇಲೆತ್ತಲು ತನ್ನ ಕೈಯ್ಯಾಸರೆ ನೀಡುವವನು ಶ್ರೇಷ್ಠ ಮಾನವನಾಗುತ್ತಾನೆ.......

``ಮಂದ್ರ'  ಓದಿದಾಗ ನನ್ನ ಮನಸ್ಸಿ ಅನ್ನಿಸಿದ್ದು ಹೀಗೆ. ಅದನ್ನೇ ಹಂಚಿಕೊಂಡಿದ್ದೇನೆ ಇದನ್ನು ನನ್ನ ಬ್ಲೋಗ್ ನಲ್ಲೂ ಕಾಣಬಹುದು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ