ಶುಕ್ರವಾರ, ಸೆಪ್ಟೆಂಬರ್ 19, 2014

ಚುಟುಕಗಳು

ಮೌನದಲಿ ನೂರಾರು ಮಾತುಗಳು ಇರುವಾಗ
ಸುಮ್ಮನೇ ವ್ಯರ್ಥ ಮಾತೇಕೆ ಬೇಕು?
ನನ್ನ ಮನಸಿನ ಭಾವ ನಿನಗರ್ಥವಾಗಿರಲು
ಒಂದು ಚೆಂದದ ಮುಗುಳುನಗೆಯಷ್ಟೆ ಸಾಕು

ನಿಶ್ವಾಸ ಉಚ್ಛ್ವಾಸದಂತೆಯೇ ಅನಿವಾರ್ಯ
ವಿಶ್ವಾಸವೆನುವ ವೈಡೂರ್ಯ ಜಗದೆ
ಆಶ್ವಾಸ ನೀಡುವುದು ಆಹ್ಲಾದ ತುಂಬುವುದು
ವಿಶ್ವದಲಿ ವಿಷಮತೆಯನಳಿಸಿ ಮುದದೆ

ಬೇಕಿಲ್ಲ ಅಮ್ಮನಿಗೆ ದೇವತೆಯ ಸ್ಥಾನ
ಸಾಕು ಅವಳಿಗೆ ನಮ್ಮ ಪ್ರೀತಿ ಅಭಿಮಾನ
ಆಶಿಸಳು ಯಾವುದೇ ಬಗೆಯ ಹೊಗಳಿಕೆಯ
ನೀಡಿದರೆ ಸಾಕವಳಿಗಾಗಿ ತುಸು ಸಮಯ

ಮುರಳಿಲೋಲನು ತೊರೆದ ಮುರಳಿ ಗಾನವು ಇರದೆ
ದ್ವಾಪರದಲಿತ್ತು ಒಂದೇ ಗೋಕುಲ
ಎಲ್ಲ ಮಕ್ಕಳು ದೂರ ದೇಶದಲ್ಲಿ ನೆಲೆಸಿಹರು
ಇಂದು ಪ್ರತಿ ಮನೆಯಲೂ ಅದೇ ವ್ಯಾಕುಲ

ತಾಯ ಪ್ರೀತಿಯು ಕಡಲ ಬಿತ್ತರ
ತಂದೆ ಹಿಮಗಿರಿಯೆತ್ತರ
ಅದಕೆ ಅದೆ ಸರಿ ಇದಕೆ ಇದೆ ಸರಿ
ಉಂಟೆ ಹೋಲಿಕೆ, ಅಂತರ?

ವೃತ್ತದೊಲು ತಾಯೊಲುಮೆ ಇಲ್ಲ ಕೊನೆ ಮೊದಲು
ಸುತ್ತಲೂ ಪಸರಿಪುದು ಸಂತಸದ ಹೊನಲು
ಅವಳಾತ್ಮ ನಲಿಯುವುದು ಶಿಶು ಸೌಖ್ಯದಲ್ಲಿ
ಬೆಳಕವಳು ಕಂದನಾ ಬಾಳಹಾದಿಯಲಿ

ಉಕ್ಕುತಿದೆ ಮನದಲ್ಲಿ ನೂರಾರು ಕವನಗಳ
ಸೃಷ್ಠಿಮಾಡುವ ಭಾವ ಸಂಭ್ರಮದ ಒರತೆ
ಕಾಗದದ ಮೇಲದನು ಬರೆಯಬೇಕೆಂದರೆ
ಎಷ್ಟು ಅಡೆತಡೆಗಳೋ! ಪದಗಳದೆ ಕೊರತೆ

ಕೇಳಲಿಕ್ಕೆ ಹಿತವಾಗಿದ್ದರೆ ಮಾತು 
ಕೇಳುವವರಿಗೂ ಆಡುವವರಿಗೂ ಭೂಷಣ....
ಇಲ್ಲವಾದರೆ ಕೇಳಲಿಕ್ಕೆ ಅಂತೂ ಭೀಷಣ 
ಆಡುವವರಿಗೆ ಹೇಗೋ ಗೊತ್ತಿಲ್ಲಣ್ಣ

ಕ್ಷೀರ ಸಾಗರವನ್ನು ಮಥಿಸಿದುದರಿಂದಲೇ
ದೇವಲೋಕದ ಸುಧೆಯು ಉತ್ಪನ್ನವಾಯ್ತು
ಕಾವ್ಯವೆನ್ನುವ ಅಮೃತ ಸೃಜಿಸಬೇಕಾದರೆ
ಕವಿ ಹೃದಯದಲಿ ನಡೆವ ಮಥನವೇ ಹೇತು

ಎಲ್ಲೊ ಸಂಪಿಗೆಯರಳಿ ಪರಿಮಳವ ಬೀರಿದರೆ
ಇಲ್ಲಿ ಈ ಮನದಲ್ಲಿ ಮೃದು ಸ್ಪಂದನ
ಮಲ್ಲೆ ಸಂಪಿಗೆ ಇರಲಿ ಚಲ್ವ ಜಾಜಿಯೆ ಇರಲಿ
ಒಲುಮೆ ತುಂಬಿದ ಮನದಿ ಹೊಸ ಕಂಪನ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ